ಸಾರ್ವಜನಿಕ ತಾಣಗಳಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವುದೇ ನಮ್ಮ ಧ್ಯೇಯ ಎಂದು ಬಿಜೆಪಿ ಮುಖಂಡ ಅಶೋಕ್ ಜಯರಾಂ ಹೇಳಿದರು.
ಮಂಡ್ಯ ನಗರದಲ್ಲಿರುವ ಮಂಡ್ಯ ವಿಶ್ವವಿದ್ಯಾನಿಲಯ ಆವರಣದಲ್ಲಿ ಎಸ್.ಡಿ. ಜಯರಾಂ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆ ಮತ್ತು ಬಿಜೆಪಿ ಪದಾಧಿಕಾರಿಗಳ ಸಹಯೋಗದಲ್ಲಿ ನಡೆದ ಸ್ವಚ್ಛ ಮಂಡ್ಯ 9ನೇ ವಾರದ ಶ್ರಮದಾನ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ನಾವು ಮಂಡ್ಯ ವಿಶ್ವವಿದ್ಯಾನಿಲಯ ಆವರಣದಲ್ಲಿ ಸ್ವಚ್ಛ ಮಂಡ್ಯ 9ನೇ ವಾರದ ಶ್ರಮದಾನ ಮಾಡುವ ಮೂಲಕ ಪ್ಲಾಸ್ಟಿಕ್ತ್ಯಾಜ್ಯವನ್ನು ಸಂಗ್ರಹಿಸಿದ್ದೇವೆ. ಸಾರ್ವಜನಿಕ ತಾಣಗಳಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವುದೇ ನಮ್ಮ ಧ್ಯೇಯ ಎಂದು ನುಡಿದರು.
ಭಾರತ ಸರ್ಕಾರದ ಗೃಹಮಂತ್ರಿ ಅಮಿತ್ ಶಾ ಬಂದು ಜಿಲ್ಲೆಯಲ್ಲಿ ಹೊಸ ಸಂಚಲನ ಸೃಷ್ಠಿಸಿದ್ದಾರೆ. ಹಳೇ ಮೈಸೂರು ವ್ಯಾಪ್ತಿಯಲ್ಲಿ ಬಿಜೆಪಿಗೆ ಶಕ್ತಿ ತುಂಬುವ ಸಂಕಲ್ಪಕ್ಕೆ ನಾಂದಿ ಹಾಡಿದ್ದಾರೆ.ಇಂತಹ ಸಮಾವೇಶಗಳಿಂದ ಬಿಜೆಪಿಗರಲ್ಲಿ ಹೊಸ ಚೈತನ್ಯ ಹೆಚ್ಚಾಗಿದೆ ಎಂದು ತಿಳಿಸಿದರು.
ಸಮಾವೇಶ ನಡೆದ ಸ್ಥಳದಲ್ಲಿ ಸಾಕಷ್ಟು ಸ್ವಚ್ಚತಾ ಕಾರ್ಯ ನಡೆದಿದೆ, ಇಂದು ಬಿಜೆಪಿ ಪದಾಧಿಕಾರಿಗಳ ಜೊತೆ ಮುಂಜಾನೆ ಶ್ರಮದಾನ ನಡೆಸಿದ್ದು, ಪ್ಲಾಸ್ಟಿಕ್ ಮುಕ್ತ, ತಂಬಾಕು ಮುಕ್ತ ವಲಯ ಎಂದು ಘೋಷಿಸಲು ನಗರಸಭೆಗೆ ಮನವಿ ಮಾಡುತ್ತೇವೆ, 30ಕೆ.ಜಿ ಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ನಗರಸಭೆ ವಾಹನಕ್ಕೆ ತುಂಬಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ ವಿವೇಕ್, ಸ್ಥಳೀಯ ಮುಖಂಡರಾದ ಗಾಂಧಿನಗರ ಚಂದ್ರು, ಮಹೇಶ್, ಗ್ರಾ.ಪಂ. ಸದಸ್ಯ ಅನಿಲ್, ಮಧು ಮತ್ತು ನರ್ಸಿಂಗ್ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.