ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಮಂಡ್ಯ ಜಿಲ್ಲೆಯ ರೈತರಿಗೆ ಈ ಬಾರಿಯೂ ಕೇವಲ ಭರವಸೆಯಷ್ಟೆ ಸಿಕ್ಕಿದೆ.
ಮಂಡ್ಯಕ್ಕೆ ಅಮಿತ್ ಶಾ ಭೇಟಿ ಮಾಡುವುದಕ್ಕೂ ಮುನ್ನಾ ರೈತ ಮುಖಂಡರ ಸಭೆ ಕರೆದು ಮಾತನಾಡಿದ ಅಬಕಾರಿ ಮತ್ತು ಜಿಲ್ಲೆ ಉಸ್ತುವಾರಿ ಸಚಿವ ಗೋಪಾಲಯ್ಯ ಅವರು, ರೈತರ ಮುಖಂಡರನ್ನು ಸಿಎಂ ಹಾಗೂ ಅಮಿತ್ ಶಾ ಜೊತೆ ಮಾತುಕತೆ ನಡೆಸಲು ಕರದೊಯ್ಯಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಯ ಬೊಮ್ಮಾಯಿ ಅವರು, ” ಮುಂದಿನ ವಾರ ತಮ್ಮನ್ನು (ರೈತ ನಾಯಕರು) ಕರೆದು ಮಾತುಕತೆ ನಡೆಸಿ ಬೆಲೆಯನ್ನು ಘೋಷಣೆ ಮಾಡುತ್ತೇನೆ” ಎಂದು ಭರವಸೆ ನೀಡಿದ್ದಾರೆಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಮುಖ್ಯಮಂತ್ರಿಗಳ ಭೇಟಿಗೆ ತೆರಳಿದ್ದ, ಐದು ಮಂದಿಯ ತಂಡ, 8.5 ಇಳುವರಿಯ ಆಧಾರ ಮೇಲೆ ದರ ನಿಗದಿ ಮಾಡಬೇಕು, ಈಗ ಇರುವ 10.25 ಆಧಾರದ ಮೇಲೆ ಬೆಲೆ ನೀಡುತ್ತಿರುವುದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿತು. ಇದಕ್ಕೆ ಮುಖ್ಯಮಂತ್ರಿಗಳಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ‘ನಾವು ಲಿಖಿತವಾಗಿ ಎಲ್ಲಾ ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದೇವೆ, ವಿದ್ಯುತ್ ಬಿಲ್ ಬಾಕಿ ಮನ್ನಾ, ಎಪಿಎಂಸಿ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳ ಪಟ್ಟಿಯನ್ನು ಅವರಿಗೆ ಸಲ್ಲಿಕೆ ಮಾಡಿದ್ದೇವೆಂದು ತಿಳಿಸಿದರು.
ಚಳವಳಿ ತೀವ್ರಗೊಳಿಸುವ ಬಗ್ಗೆ ಚರ್ಚೆ
ಕಳೆದ 57 ದಿನಗಳಿಂದ ನಾವು ನಿರಂತರ ಹೋರಾಟ ಮಾಡುತ್ತಿದ್ದರೂ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮೀನಾಮೇಷ ಎಣಿಸಿಸುತ್ತಿದೆ, ಈ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಿ ಹೋರಾಟ ತೀವ್ರಗೊಳಿಸುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಕೆಂಪೂಗೌಡ ತಿಳಿಸಿದರು.
ಪೊಲೀಸರು ನಾವು ಹೋರಾಟ ನಡೆಸುತ್ತಿದ್ದ ಪೆಂಡಾಲ್ ಗಳನ್ನು ಕಿತ್ತು ಹಾಕಿದ ನಂತರ, ಕೆಪಿಟಿಸಿಎಲ್ ನವರು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲು ಉದ್ದೇಶಿಸಿದ್ದರು. ಮತ್ತೇ ನಮ್ಮ ಹೋರಾಟ ಪಾರಂಭವಾದ ನಂತರ ಅದಕ್ಕೆ ಬ್ರೇಕ್ ಬಿದ್ದಿದೆ. ಹೋರಾಟ ನಡೆಸಿದರೂ ಇಷ್ಟೆಲ್ಲಾ ಶೋಷಣೆ ಮಾಡುತ್ತಿರುವಾಗ ಹೋರಾಟ ನಿಲ್ಲಿಸಿದರೆ, ನಮಗೆ ಎಂದಿಗೂ ನ್ಯಾಯ ಸಿಗುವುದಿಲ್ಲ ಎಂಬುದು ಮನವರಿಗೆ ಆಗಿದೆ, ಆದ್ದರಿಂದ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ರೈತಮುಖಂಡರಾದ ಲಿಂಗಪ್ಪಾಜಿ, ರವಿಕುಮಾರ್, ಬಾಲಚಂದ್ರು, ವಿಜಯ್ ಕುಮಾರ್, ವೈ.ಜಿ.ರಮೇಶ್ ಮತ್ತು ಸ್ವಾಮಿ ಉಪಸ್ಥಿತರಿದ್ದರು.