ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ನಿಷ್ಕ್ರಿಯಗೊಳಿಸದೇ ಕಾಯ್ದೆಯನ್ನು ಬಲಪಡಿಸಿ ವ್ಯವಸಾಯವನ್ನೇ ನಂಬಿಕೊಂಡಿರುವ ರೈತರನ್ನು ಉಳಿಸಬೇಕೆಂದು ಆಗ್ರಹಿಸಿ ಜೂ.28ರಂದು ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನೂರಾರು ರೈತರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ಪ್ರಾಂತ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್ ರಾಜು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಸಾನ್ ಸಮ್ಮಾನ್ ಯೋಜನೆಯ ಮುಖಾಂತರ ಕೇಂದ್ರ ಸರ್ಕಾರ 6 ಸಾವಿರ ಹಾಗೂ ರಾಜ್ಯ ಸರ್ಕಾರ 4 ಸಾವಿರವನ್ನು ರೈತರ ವ್ಯವಸಾಯದ ಖರ್ಚಿಗೆ ಧನಸಹಾಯ ಮಾಡುತ್ತಿರುವುದರಿಂದ ರೈತರ ಆತ್ಮಹತ್ಯೆಗಳು ಕೊಂಚ ತಗ್ಗಿದೆ. ಒಳಸುರಿಗಳಿಂದ ವ್ಯವಸಾಯದ ಖರ್ಚು ಇಂದಿನ ದಿನಗಳಲ್ಲಿ ತುಂಬಾ ಹೆಚ್ಚಾಗಿದೆ. ಇದರಿಂದ ಗೃಹ ಕಂಗಾಲಾಗಿದ್ದಾನೆ, ಇಂತಹ ಸಂದರ್ಭದಲ್ಲಿ ನಮ್ಮ ರಾಜ್ಯ ಸರ್ಕಾರದಿಂದ ಸಿಗುತ್ತಿರುವ 4 ಸಾವಿರ ಧನ ಸಹಾಯವನ್ನು 10 ಸಾವಿರ ರೂಪಾಯಿಗಳಿಗೆ ಏರಿಸಿ ರೈತರನ್ನು ಉಳಿಸಬೇಕಾಗಿದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಂಸ್ಥೆ (ಎಪಿಎಂಸಿ) ಯ ಹೊರಗೂ ರೈತರ ಉತ್ಪನ್ನ ಮಾರಾಟ ಮಾಡಲು ಅವಕಾಶ ಕಲ್ಪಿಸುವ ರೈತ ಉತ್ಪನ್ನ ವಾಣಿಜ್ಯ ವ್ಯವಹಾರ ಕಾಯ್ದೆ, ಬೆಲೆ ಖಾತ್ರಿ ಒಪ್ಪಂದ ಮತ್ತು ಕೃಷಿ ಸೇವೆಗಳ (ಸಬಲೀಕರಣ ಮತ್ತು ರಕ್ಷಣೆ) ಕಾಯ್ದೆ ಹಾಗೂ ಕೃಷಿ ಉತ್ಪನ್ನಗಳ ದಾಸ್ತಾನು ಮಿತಿ ರದ್ದುಗೊಳಿಸುವ ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆಗಳು ಈಗಾಗಲೇ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಈ ಕೃಷಿ ಕಾಯ್ದೆಗಳು ರೈತರಿಗೆ ಅನುಕೂಲಕರವಾಗಿರುವುದರಿಂದ ಅದನ್ನು ಉಳಿಸಿಕೊಂಡು ಇನ್ನಷ್ಟು ಬಲಪಡಿಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಂಘ ಮುಖಂಡರಾದ ವೆಂಕಟೇಶ್ ಪಣಕನಹಳ್ಳಿ, ಹಾಡ್ಯ ರಮೇಶ್ ರಾಜು, ಜೆ.ಕೆ.ಬಸವರಾಜು, ಪುಟ್ಟಮ್ಮ ಉಪಸ್ಥಿತರಿದ್ದರು.