ಬೀದರ್ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಹೆಚ್ಚುತ್ತಿದೆ. ಪಕ್ಷದ ಸಂಘಟನೆ ಬಲಿಷ್ಠಗೊಳ್ಳುತ್ತಿದೆ. ಈ ಬಾರಿ ರೈತ ಸಮುದಾಯದಲ್ಲಿ ಬಿಜೆಪಿ ವಿರೋಧಿ ಅಲೆ ಆರಂಭವಾಗಿದೆ. ಎಲ್ಲ ಭಾಗದಲ್ಲೂ ರೈತರು ಜೆಡಿಎಸ್ ಬೆಂಬಲಿಸಬೇಕೆಂಬ ವಾತಾವರಣ ನಿರ್ಮಾಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೀದರ್ನಲ್ಲಿ ಪಂಚರತ್ನ ರಥಯಾತ್ರೆ ಆರಂಭಿಸುವುದನಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಜಿಲ್ಲೆಯಲ್ಲಿ ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವೆಡೆ ತೊಗರಿ ಬೆಳೆ ನಷ್ಟವಾಗಿದೆ. ಆದರೂ, ಸರ್ಕಾರ ರೈತರ ನೆರವಿಗೆ ಬರಲಿಲ್ಲ” ಎಂದು ದೂರಿದರು.
ಅಮಿತ್ ಶಾಗೂ ಕರ್ನಾಟಕಕ್ಕೂ ಏನು ಸಂಬಂಧ ?
“ಅಮಿತ್ ಶಾ ಅವರಿಗೂ ಕರ್ನಾಟಕಕ್ಕೂ ಏನು ಸಂಬಂಧ? ನನಗೆ ಅಮಿತ್ ಶಾ ಬಗ್ಗೆ ಆತಂಕವಿಲ್ಲ. ಅಷ್ಟೇ ಅಲ್ಲ ಯಾವುದೇ ಪಕ್ಷದ, ಯಾವುದೇ ವ್ಯಕ್ತಿಯ ಬಗ್ಗೆ ನನಗೆ ಆತಂಕವಿಲ್ಲ. ನಮಗೆ ರೈತರ ಬಗ್ಗೆ ಕಾಳಜಿ ಕಳಕಳಿ ಇದೆ. ಜನರೊಟ್ಟಿಗೆ ನಾವಿದ್ದೇವೆ. ಜನರಿಗಾಗಿ ನಾವು ಹೋರಾಡುತ್ತಿದ್ದೇವೆ” ಎಂದರು. “ನಾಯಿ-ನರಿಗಳ ಹೆಸರಿನಲ್ಲಿ ಎರಡು ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ನಾವು ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಬದುಕಿನ ಬಗ್ಗೆ ಯಾರು ಚರ್ಚೆ ಮಾಡಲು ತಯಾರಿಲ್ಲ. ಬಡವರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಯಾರು ತಲೆ ಕಡೆಸಿಕೊಳ್ಳುತ್ತಿಲ್ಲ” ಎಂದರು.
ಬಿಜೆಪಿಗರು ರಾಜ್ಯದಲ್ಲಿ ಕೆಟ್ಟ ಸಂಸ್ಕೃತಿ ಬೆಳಸಿಕೊಂಡು ಬಂದಿದ್ದಾರೆ
“ಮುಖ್ಯಮಂತ್ರಿಗಳು ತಮಗೆ ಸ್ಯಾಂಟ್ರೋ ರವಿ ಗೊತ್ತಿಲ್ಲ ಎಂದಿದ್ದಾರೆ. ಗೊತ್ತಿಲ್ಲದಿದ್ದರೂ ಅವರಿಗೆ ಅದೇಗೆ ಆತ ಮೆಸೇಜ್ ಮಾಡ್ತಿದ್ದ. ಅಂತವರನ್ನು ಯಾಕೆ ಜೊತೆಗೆ ಇಟ್ಕೊಂಡಿದ್ದಾರೆ. ಬಿಜೆಪಿಗರು ರಾಜ್ಯದಲ್ಲಿ ಕೆಟ್ಟ ಸಂಸ್ಕೃತಿ ಬೆಳಸಿಕೊಂಡು ಬಂದಿದ್ದಾರೆ. ಕುಮಾರಕೃಪದ ಸುತ್ತಮುತ್ತ ಏನು ನಡೀತಿದೆ. ಸ್ಯಾಂಟ್ರೋ ರವಿ ಏನು ಮಾಡ್ತಿದ್ದಾರೆ. ಅವರಿಗೆ ಇದುವರೆಗೂ ಗೊತ್ತಾಗಿಲ್ವಾ?” ಎಂದು ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪೂರ್, ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸಂಭಾವ್ಯ ಅಭ್ಯರ್ಥಿ ರಮೇಶ್ ಪಾಟೀಲ್ ಸೋಲಪುರ್ ಸೇರಿದಂತೆ ಇತರರಿದ್ದರು.