ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದಲ್ಲಿಂದು ಪೌರಾಣಿಕ ನಾಟಕದಲ್ಲಿ ಅಭಿನಯಿಸುತ್ತಿದ್ದ ವೇಳೆ ರಂಗ ಕಲಾವಿದನೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಗ್ರಾಮದ ಡಿ.ಎನ್.ನಂಜಯ್ಯ(41) ಮೃತಪಟ್ಟ ರಂಗಭೂಮಿ ಕಲಾವಿದ. ಇತ್ತೀಚೆಗೆ ನಾಟಕಗಳಲ್ಲಿ ಅಭಿಯನ ಮಾಡುವುದನ್ನು ರೂಢಿಸಿಕೊಂಡಿದ್ದ ನಂಜಯ್ಯ ಹಲವಾರು ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದರು.
ಇಂದು ಬಂಡೂರು ಗ್ರಾಮದಲ್ಲಿ ‘ಶ್ರೀ ಕೃಷ್ಣ ಸಂಧಾನ’ ಎಂಬ ನಾಟಕದ ಪ್ರದರ್ಶನ ನಡೆಯುತಿತ್ತು. ನಂಜಯ್ಯ ಸೇರಿದಂತೆ ಸುಮಾರು ಹಲವು ಕಲಾವಿದರು ಅಭಿನಯಿಸುತ್ತಿದ್ದರು. ನಾಟಕದಲ್ಲಿ ಸಾತ್ಯಕಿ, ಸೈಂಧವ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದ ನಂಜಯ್ಯ ಪಾತ್ರದಲ್ಲಿ ತಲ್ಲಿನರಾಗಿದ್ದ ವೇಳೆಯೇ ನೋಡ ನೋಡುತ್ತಲೇ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಇತರ ಕಲಾವಿದರು ಹಾಗೂ ಗ್ರಾಮಸ್ಥರು ಅವರನ್ನು ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆದಾಗಲೇ ಹೃದಯಾಘಾತದಿಂದ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದರು. ಘಟನೆಯಿಂದಾಗಿ ಇಡೀ ಕಲಾವಿದರ ಬಳಗ ಮತ್ತು ದುಗ್ಗನಹಳ್ಳಿ ಹಾಗೂ ಬಂಡೂರು ಗ್ರಾಮಗಳಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.