ಮಂಡ್ಯ ತಾಲೂಕಿನ ಹೊಳಲು ಗ್ರಾಮಕ್ಕೆ ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಹೊಳಲು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಮಾಡಿದ ಅವರು, ಎಲ್ಲರ ಸಹಕಾರದಿಂದ ಕ್ಷೇತ್ರದಲ್ಲಿ ಗೆದ್ದು ಬಂದಿದ್ದೇನೆ. ಮೇಲುಕೋಟೆ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ನಿರ್ಧರಿಸಿದ್ದೇನೆ. ಇದಕ್ಕೆ ನಿಮ್ಮಗಳ ಸಹಕಾರ ನಿರಂತರವಾಗಿ ಇರಲಿ ಎಂದು ಹೇಳಿದರು.
ಕ್ಷೇತ್ರದ ಯುವಜನರಿಗೆ ಉದ್ಯೋಗ ಕಲ್ಪಿಸುವುದು, ಶಿಕ್ಷಣ, ಆರೋಗ್ಯ ಸೇವೆಗಳನ್ನು ಎಲ್ಲರಿಗೂ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದಾಗಿ ಭರವಸೆ ನೀಡಿದರು. ಕೃಷಿ ಕ್ಷೇತ್ರವನ್ನು ಆದಾಯ ತರುವ ಉದ್ಯಮವನ್ನಾಗಿ ರೂಪಿಸಬೇಕಾಗಿದೆ. ಕೃಷಿಯಿಂದ ವಿಮುಖರಾಗುತ್ತಿರುವವರನ್ನು ಮತ್ತೆ ಕೃಷಿಯತ್ತ ಸೆಳೆಯುವ ಅವಶ್ಯಕತೆಯೂ ಇದೆ. ಎಲ್ಲ ಉತ್ಪಗಳಿಗೂ ಒಂದೊಂದು ರೀತಿಯ ಬೆಲೆ ಇದೆ. ಆದರೆ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ಸದನದಲ್ಲಿ ಗಮನ ಸೆಳೆಯುವ ಸಂಕಲ್ಪ ಮಾಡಿದ್ದೇನೆ ಎಂದರು.
ತರಕಾರಿ ಸೇರಿದಂತೆ ವಿವಿಧ ಬೆಳೆಗಳ ದಾಸ್ತಾನು ಮಾಡಲು ಶೀತಲೀಕರಣ ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ. ನೀರಾವರಿಗೆ ಹೆಚ್ಚಿನ ಆಧ್ಯತೆ ನೀಡಬೇಕಿದೆ. ಮಹಿಳೆಯರಿಗೂ ಉದ್ಯೋಗ ಸೃಷ್ಠಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದಾಗಿ ತಿಳಿಸಿದರಲ್ಲದೆ, ಎಲ್ಲ ಕಾರ್ಯಗಳಿಗೂ ನನಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದ ಯಾವುದೇ ಗ್ರಾಮಕ್ಕೆ ನಾನು ಸೇರಿದಂತೆ ಮುಖಂಡರು ಭೇಟಿ ಮಾಡಿದಾಗ ಅವರಿಗೆ ಸಮಸ್ಯೆಗಳು, ಅಲ್ಲಿನ ಆಗಿರುವಂತಹ ಕೆಲಸಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಅದು ಬಿಟ್ಟು ದುಂದು ವೆಚ್ಚ ಮಾಡಿ ಹಾರ ತುರಾಯಿಗಳನ್ನು ಹಾಕುವುದು, ಪಟಾಕಿಗಳನ್ನು ಸಿಡಿಸುವುದನ್ನು ಮಾಡಬಾರದು. ಅದೇ ಹಣವನ್ನು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಮುಖಂಡರಾದ ಚಂದನ್, ನಂದೀಶ್, ಜಟ್ಟಿ ಕುಮಾರ್, ನಿಂಗೇಗೌಡ, ಚೇತನ್, ಪಟೇಲ್ ರಾಮು, ಶಿವರಾಜು, ದೀಪಕ್, ಸೂರಿ, ಯಶ್ವಂತ್, ಅಭಿನಂದನ್, ಮನು, ಸಂತೋಷ್, ಚಿಕನ್ ರವಿ, ವೇಣು, ಮಾಜಿ ಗ್ರಾ.ಪಂ. ಅಧ್ಯಕ್ಷೆ ಲಿಂಗರಾಜಮ್ಮ, ಪ್ರೇಮ, ರೈತ ನಾಯಕಿ ಲತಾ ಶಂಕರ್, ರೈತ ಸಂಘದ ಕಾರ್ಯಕರ್ತರು, ಅಭಿಮಾನಿಗಳು ಇದ್ದರು. ಇದೇ ವೇಳೆ ಅಭಿಮಾನಿಗಳು ಭಾರೀ ಗಾತ್ರದ ಕೇಕ್ ಕತ್ತರಿಸಿ ಅವರನ್ನು ಸನ್ಮಾನಿಸಿ, ವಿಜಯೋತ್ಸವ ಆಚರಿಸಿದರು.