ಪ್ರತಿನಿತ್ಯ ದೇಶದಲ್ಲಿ ನೂರಾರು ಅಪಘಾತಗಳು ನಡೆಯುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದೆ, ಹಾಗಾಗಿ ಎಲ್ಲರೂ ಕೂಡ ರಕ್ತದಾನ ಮಾಡಿ ಜನರ ಪ್ರಾಣ ಉಳಿಸಿ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಸಲಹೆ ನೀಡಿದರು.
ಮಂಡ್ಯದ ಪಿ.ಇ.ಎಸ್.ಇಂಜಿನಿಯರಿಂಗ್ ಕಾಲೇಜು ಆವರಣದ ಡಾ.ಹೆಚ್.ಡಿ. ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಶುಕ್ರವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಯುವ ರೆಡ್ ಕ್ರಾಸ್ ಘಟಕ, ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜು, ರಕ್ತ ನಿಧಿ ಕೇಂದ್ರ ಮಿಮ್ಸ್ ಇವರ ಸಹಯೋಗದಲ್ಲಿ ರಾಷ್ಟ್ರೀಯ ಯುವದಿನ ಆಚರಣೆಯ ಅಂಗವಾಗಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತ ದಾನ ಮಾಡಿ ಮಾತನಾಡಿದರು.
ರಕ್ತದಾನ ಶ್ರೇಷ್ಠವಾದ ಕೆಲಸ. ಇಂದು ರಕ್ತದ ಅವಶ್ಯಕತೆ ಸಾಕಷ್ಟಿದ್ದು, ಪ್ರತಿಯೊಬ್ಬರೂ ರಕ್ತವನ್ನು ಕೊಟ್ಟು ಜನರ ಪ್ರಾಣವನ್ನು ಉಳಿಸಬೇಕು. ರೆಡ್ ಕ್ರಾಸ್ ಸಂಸ್ಥೆ ಬಹಳ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ ಅವರಿಗೆ ನನ್ನ ಅಭಿನಂದನೆಗಳು ಎಂದರು.
ಯುವ ಜನತೆ ರಕ್ತದಾನ ಮಾಡಲಿ
ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಮೀರಾಶಿವಲಿಂಗಯ್ಯ ಮಾತನಾಡಿ, ರಕ್ತದಾನ ಬಹಳ ಮಹತ್ವದ್ದಾಗಿದೆ. ಜನರ ಪ್ರಾಣ ಉಳಿಸಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು. ಇಂತಹ ರಕ್ತದಾನ ಶಿಬಿರಗಳನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ. ಯುವಜನತೆ ಇಂತಹ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಸಾಮಾಜಿಕ ಹೊಣೆಗಾರಿಕೆ ಮೆರೆಯಬೇಕೆಂದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಎನ್ ಗೋಪಾಲಕೃಷ್ಣ ಅವರು ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜು,ಯುವ ರೆಡ್ ಕ್ರಾಸ್ ಘಟಕದ ಡಾ.ಷಣ್ಮುಖ, ರಕ್ತನಿಧಿ ವೈದ್ಯಾಧಿಕಾರಿ ಡಾ.ವೈ ಮುರಳೀಧರ್ ಭಟ್, ರೆಡ್ ಕ್ರಾಸ್ ಸಂಸ್ಥೆಯ ಸದಸ್ಯ ರಂಗಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.