ಯೋಗಾಸನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ವೃದ್ದಿಸುತ್ತದೆ. ಯೋಗ ದಿನನಿತ್ಯ ಚಟುವಟಿಕೆ ಯಾಗಬೇಕು ಎಂದು ಹೇಳಿದ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು, ಪ್ರಪಂಚಕ್ಕೆ ಯೋಗವನ್ನು ಪರಿಚಯಿಸಿದ ದೇಶ ಭಾರತ. ಇಂದು ಭಾರತ ದೇಶ ಯೋಗದ ವಿಶ್ವಗುರು ಎಂದು ತಿಳಿಸಿದರು.
ಮಂಡ್ಯನಗರದ ಪಿ.ಇ.ಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಯೋಗಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 2014 ರಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಬಗ್ಗೆ ವಿಶ್ವಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿತು. ಇಂದು 140 ಕ್ಕೂ ಹೆಚ್ಚು ದೇಶ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದೆ ಎಂದರು.
ಅತಿವೃಷ್ಠಿಯ ಹಿನ್ನೆಲೆ ಮುಂದೂಡಲಾಯಿತು. ಇಂದು 21 ಜಿಲ್ಲೆಯಲ್ಲಿ ಏಕಕಾಲಕ್ಕೆ ಯೋಗಾಥಾನ್ ಕಾರ್ಯ ಕ್ರಮ ನಡೆಯುತ್ತಿದೆ, 10 ಲಕ್ಷ ಕ್ಕೂ ಹೆಚ್ಚು ಜನರು ನೊಂದಣಿ ಮಾಡಿಕೊಂಡಿದ್ದಾರೆ. ರಾಜಸ್ಥಾನದ ಕೋಟದಲ್ಲಿ ಈ ಹಿಂದೆ 1,08,000 ಜನ ಯೋಗಾಸಕ್ತರು ಭಾಗವಹಿಸಿ ಗಿನ್ನೀಸ್ ರೆಕಾರ್ಡ್ ಮಾಡಿದ್ದಾರೆ. ಇಂದು ಕರ್ನಾಟಕ ಕೂಡ ಗಿನ್ನೀಸ್ ಬುಕ್ ಆಫ್ ರೆಕಾಡ್೯ಗಾಗಿ ಯೋಗಾಥಾನ್ ಮೂಲಕ ಪ್ರಯತ್ನ ನಡೆಸುತ್ತಿದೆ ಎಂದರು.
ಅದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಪುರುಷೋತ್ತಮಾನಂದ ಸ್ಮಾಮೀಜಿ ಮಾತನಾಡಿ,
ಯೋಗಾಸನ ಮತ್ತು ಆಯುರ್ವೇದ ಭಾರತದಲ್ಲಿ ಪುರಾತನ ಕಾಲದಿಂದಲೂ ಇದೆ. ಯೋಗಾಸನದಲ್ಲಿ ಜಾತಿ ಬೇಧವಿಲ್ಲ ಎಲ್ಲರೂ ಭಾಗವಹಿಸಬಹುದು. ಸೋದರ ಭಾವನೆ ಬೆಳೆಸುತ್ತದೆ. ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಬೆಳಸುತ್ತದೆ. ಯೋಗಾಭ್ಯಾಸವನ್ನು ಪ್ರತಿ ದಿನ ಮನೆಯಲ್ಲಿ ಮಾಡಿ ಎಂದರು.
ಪತಾಂಜಲಿ ಯೋಗ ಸಂಸ್ಥೆಯ ಶಂಕರ ನಾರಾಯಣ ಶಾಸ್ತ್ರೀ ಅವರು ಮಾತನಾಡಿ, ದೇಹ ಮತ್ತು ಮನಸ್ಸು ಹಿಡಿತದಲ್ಲಿದ್ದರೆ ಯೋಗಾಭ್ಯಾಸ ನಡೆಸಬಹುದು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಯೋಗಾಸನ ಭಾರತೀಯ ಪರಂಪರೆ. ಯೋಗಾಸನವನ್ನು ಉಳಿಸಿ ಬೆಳಸಿ ಎಂದರು.
8000 ಕ್ಕೂ ಹೆಚ್ಚು ಯೋಗಾಸಕ್ತರು ಭಾಗಿ
ಯೋಗಾಥಾನ್ ನಲ್ಲಿ 8000 ಕ್ಕೂ ಹೆಚ್ಚು ಜನರು ಭಾಗಿಯಾಗಿ ವಿವಿಧ ಆಸನಗಳ ಪ್ರದರ್ಶನ ನೀಡಿದರು. ಯೋಗಾಥಾನ್ ನಲ್ಲಿ ಮೊದಲಿಗೆ ಪ್ರಾರ್ಥನೆ, ಸಮಸ್ಥಿತಿ, ಕುತ್ತಿಗೆ ಹಿಂದೆ ಮುಂದೆ, ಕುತ್ತಿಗೆ ಬಲ. ಎಡ, ಕುತ್ತಿಗೆಯನ್ನು ವೃತ್ತಾಕಾರದಲ್ಲಿ ತಿರುಗಿಸುವುದು, ಭುಜದ ವ್ಯಾಯಾಮ ಮೇಲೆ ಕೆಳಗೆ, ವೃತ್ತಾಕಾರದಲ್ಲಿ ತಿರುಗಿಸುವುದು, ಮಂಡಿ ವ್ಯಾಯಾಮ, ಸೊಂಟದ ವ್ಯಾಯಾಮ ನಡೆಯಿತು.
ನಂತರ ತಡಾಸನ, ವೃಕ್ಷಾಸನ, ಪಾದ ಹಸ್ತಾಸನ-1, ಪಾದ ಹಸ್ತಾಸನ-2, , ಅರ್ಧಚಕ್ರಾಸನ, ತ್ರಿಕೋನಾಸನ, ಸಮದಂಡಾಸನ,ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ಮಕರಾಸನ, ವಕ್ರಾಸನ, ಸರಳಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಭಂದಾಸನ, ಉತ್ಥಾನ ಪಾದಾಸನ, ಅರ್ಧ ಹಾಲಾಸನ, ಪವನ ಮುಕ್ತಾಸನ, ಶವಾಸನ, ಕಪಾಲಭಾತಿ, ನಾಡಿ ಶೋಧನ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮ, ಭ್ರಮರೀ ಪ್ರಾಣಾಯಾಮ, ಧ್ಯಾನ, ಶಾಂತಿ ಮಂತ್ರ ಹೇಳಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ,ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.