ಮಂಡ್ಯ ನಗರ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಫೆಬ್ರವರಿ 11 ರಂದು ವರ್ಷದ ಮೊದಲ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ ನಳಿನಿಕುಮಾರಿ ಅವರು ತಿಳಿಸಿದರು.
ಮಂಡ್ಯ ನಗರದ ಜಿಲ್ಲಾ ನ್ಯಾಯಾಲಯದ ಕಟ್ಟಡ ಸಭಾಂಗಣದಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ 77,304 ಪ್ರಕರಣಗಳು ಬಾಕಿ ಇದ್ದು, ಅದರಲ್ಲಿ 12,922 ಪ್ರಕರಣಗಳನ್ನು ರಾಜಿಗಾಗಿ ಗುರುತಿಸಲಾಗಿದೆ. ಹೀಗಾಗಲೆ ಪೂರ್ವಬಾವಿ ಬೈಠಕ್ ಗಳ ಮೂಲಕ 1142 ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದರು.
ಕಳೆದ ಬಾರಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 10,496 ಪ್ರಕರಣಗಳು ಇತ್ಯರ್ಥವಾಗಿದೆ. ಅದರಲ್ಲಿ 244 ಬ್ಯಾಂಕ್ ಪ್ರಕರಣಗಳು, 473 ರಾಜಿ ಪ್ರಕರಣಗಳು, 66 ಎಲೆಕ್ಟ್ರಿಕ್ ಪ್ರಕರಣಗಳು, 162 MACT ಪ್ರಕರಣಗಳು, 11 ಕೌಟುಂಬಿಕ ಪ್ರಕರಣಗಳು, 456 NI Act ಪ್ರಕರಣಗಳು, 381 ಸಿವಿಲ್ ವ್ಯಾಜ್ಯ ಪ್ರಕರಣಗಳು, 8166 ಇತರೆ ಪ್ರಕರಣಗಳು ಹಾಗೂ 537 ರೆವಿನ್ಯೂ ಪ್ರಕರಣಗಳು ಇತ್ಯರ್ಥವಾಗಿದೆ ಎಂದು ತಿಳಿಸಿದರು.
ಜನ ಸಾಮಾನ್ಯರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಈ ಬಾರಿಯ ಲೋಕ ಅದಾಲತ್ ನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಪಡಿಸಿಬೇಕಿದೆ. ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ನ್ಯಾಯಾಲಯ ಶುಲ್ಕ ವಾಪಸ್ಸು
ಲೋಕ ಅದಾಲತ್ ನಿಂದ ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ, ಶೀಘ್ರವಾಗಿ ಪರಿಹರಿಸಿಕೊಳ್ಳಬಹುದು. ಸಮಯ ಉಳಿಯುವ ಜತೆಗೆ ಕಕ್ಷಿದಾರರ ನಡುವಿನ ಸಂಬಂಧ ಚೆನ್ನಾಗಿ ಉಳಿಯುತ್ತದೆ. ಯಾವುದೇ ಕೋರ್ಟ್ ಫೀಸ್ ಕಟ್ಟಬೇಕಿಲ್ಲ. ಪ್ರಕರಣ ರಾಜಿಯಾದಲ್ಲಿ ಶೇ.100ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುವುದು.
ಕಾನೂನು ನೆರವು ಅಭಿರಕ್ಷಕರ ಕಛೇರಿ
ಉಚಿತವಾಗಿ ಕಾನೂನು ಸೇವೆ ನೀಡುವ ಸಲುವಾಗಿ ಕಾನೂನು ನೆರವು ಅಭಿರಕ್ಷಕರ ಕಛೇರಿಯನ್ನು ಹೊಸದಾಗಿ ಉದ್ಘಾಟಿಸಲಾಗಿದ್ದು, ಇದರಲ್ಲಿ 4 ಮಂದಿ ಪಧಾದಿಕಾರಿಗಳನ್ನು ನೇಮಿಸಿದ್ದೇವೆ. ಇವರುಗಳು ಎಲ್ಲಾ ಬಗೆಯ ಕ್ರಿಮಿನಲ್ ಪ್ರಕರಣಗಳಲ್ಲಿ, ನ್ಯಾಯಾಲಯದಲ್ಲಿ ಯಾರಿಗೆಲ್ಲಾ ಕಾನೂನು ನೆರವಿನ ಅಗತ್ಯವಿರುವವರೆಗೆ ಪ್ರಾಧಿಕಾರವನ್ನು ಪ್ರತಿಬಿಂಬಿಸಿ ಪಕ್ಷಗಾರರಿಂದ ಯಾವುದೇ ಹಣ ಪಡೆಯದೇ ಉಚಿತವಾಗಿ ಕಾನೂನು ನೆರವನ್ನು ನೀಡಲಾಗುತ್ತದೆ. ಜೈಲಿನಲ್ಲಿರುವ ವಿಚಾರಣಾಧೀನ ಬಂದಿನಿವಾಸಿಗಳು, 1 ಲಕ್ಷಕ್ಕಿಂತ ಕಡಿಮೆ ಆದಾಯವಿರು ವವರು, ಎಸ್.ಸಿ ಎಸ್.ಟಿ ಸಮುದಾಯದವರು ಈ ಕಾನೂನು ನೆರವನ್ನು ಪಡೆಯಬಹುದಾಗಿದೆ ಎಂದರು.