ಕೇಂದ್ರ ಸಚಿವ ಹಾಗೂ ಮಂಡ್ಯ ಸಂಸದ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನಿಸಿರುವ ಮಹಿಳೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಂಡ್ಯದಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ಮುಖಂಡರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ
ಮಂಡ್ಯ ನಗರದ ಸೈಬರ್ ಪೋಲಿಸ್ ಠಾಣೆಯಲ್ಲಿ ಜೆಡಿಎಸ್ ಜಿಲ್ಲಾ ವಕ್ತಾರ ರಘುನಂದನ್ ಎಂ.ಎಸ್ ದೂರು ದಾಖಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಂಗಳ ಎಂಬ ಮಹಿಳೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕುರಿತು ಅಂತ್ಯಂತ ಕೀಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಮಹಿಳೆಯು ದುರುದ್ದೇಶ ಪೂರ್ವಕವಾಗಿ ಅವಮಾನ ಮಾಡುವ ದೃಷ್ಟಿಯಿಂದ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಮತ್ತು ದರ್ಶನ್ ಪ್ರಕರಣಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಆದಾಗ್ಯೂ ಅನಾವಶ್ಯಕವಾಗಿ ದರ್ಶನ್ ಪ್ರಕರಣದಲ್ಲಿ ಕುಮಾರಸ್ವಾಮಿ ಹೆಸರನ್ನು ಎಳೆದು ತಂದು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಪೇಸ್ಬುಕ್ ನಲ್ಲಿ ಬಾಯಿಗೆ ಬಂದಹಾಗೆ ಬೈದು ಅವಮಾನ ಮಾಡಿರುವುದರಿಂದ ಜೆ.ಡಿ.ಎಸ್ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ, ನಾಯಕರುಗಳಿಗೆ ನೋವಾಗಿದೆ, ಈ ಅವಹೇಳನಕಾರಿ ವೀಡಿಯೋ ತುಂಬಾ ವೈರಲ್ ಆಗಿರುವುದರಿಂದ ಸಾಮಾಜಿಕ ಜಾಲತಾಣದ ಖಾತೆಗಳಿಂದ ವಿಡಿಯೋವನ್ನು ಮೇಲೆ ಕ್ರಮ ತೆಗೆದು ಹಾಕಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ವಸಂತ್ ರಾಜ್, ಮೋಹನ್ ಕುಮಾರ್, ಬೂದನೂರು ಸ್ವಾಮಿ, ನಗರಸಭೆ ಸದಸ್ಯ ನಾಗೇಶ್, ರಾಕೇಶ್, ಮಾಚ ಗೌಡನಹಳ್ಳಿ ಮೋಹನ್ ಉಪಸ್ಥಿತರಿದ್ದರು.