ವಿವೇಕಾನಂದರ ಆಚಾರ-ವಿಚಾರ, ನಡೆ-ನುಡಿಗಳನ್ನು ಪಾಲಿಸಿದರೆ ಜೀವನದಲ್ಲಿ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯ.ಸ್ವಾಮಿ ವಿವೇಕಾನಂದರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಶಾಸಕ ಎಂ. ಶ್ರೀನಿವಾಸ್ ತಿಳಿಸಿದರು.
ಮಂಡ್ಯ ನಗರದ ಕೆರೆಯಂಗಳದ ಕೆ.ಎಚ್.ಬಿ ಬಡಾವಣೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ಆವರಣದಲ್ಲಿ ನಡೆದ ಸ್ವಾಮಿ ವಿವೇಕಾನಂದರ 160ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಬಹಳ ಸಂತೋಷದ ಸಂಗತಿ.ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲಾ ಮುನ್ನೆಡೆದು ದೇಶದ ಅಭಿವೃದ್ಧಿ ಮಾಡೋಣ ಎಂದರು.
ನಗರಸಭಾ ಅಧ್ಯಕ್ಷ ಹೆಚ್.ಎಸ್.ಮಂಜು ಮಾತನಾಡಿ,ಜಗತ್ತು ಕಂಡ ಅಪರೂಪದ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು. ಅವರೊಬ್ಬ ಮಾನವತೆಯ ಮಹಾನ್ ಚೇತನ, ತನ್ನ ಅದಮ್ಯ ದೇಶಪ್ರೇಮ, ಯುವ ಜನಪರ ಚಿಂತನೆಗಳಿಂದ ಆದರ್ಶಪ್ರಾಯರಾದ ಮೇರು ವ್ಯಕ್ತಿ ಎಂದರು.
ವಿವೇಕಾನಂದರ ಪ್ರಕಾರ ಶಿಕ್ಷಣ ನಮ್ಮಲ್ಲಿ ಶ್ರದ್ಧೆ, ಆತ್ಮವಿಶ್ವಾಸ, ಉತ್ಸಾಹ ಹಾಗೂ ಘನತೆ ಹೆಚ್ಚಿಸಲು ಸಹಕಾರಿ ಆಗಬೇಕು. ವಿದ್ಯಾರ್ಥಿಗಳ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಿದಾಗ ಅವರಿಗೆ ಸಮಾಜಮುಖಿ ಗುಣ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ನಂಬಿದ್ದರು ಎಂದರು.
ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್. ನಾಗರಾಜು ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾಗಿದ್ದರು. ಇಂದಿಗೂ ಸಹ ಕೋಟ್ಯಂತರ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರ ಸಂದೇಶ, ಅವರು ನೀಡಿರುವಂತಹ ಅಮೂಲ್ಯವಾದ ದಾರಿ ಅನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಆಶ್ರಮದ ಗೌರವ ಅಧ್ಯಕ್ಷ ಬಿ.ಸಿ ಶಿವಾನಂದ, ಧರ್ಮದರ್ಶಿಗಳಾದ ಜಿ.ವಿ.ನಾಗರಾಜು ಪ್ರೇಮಹಂದೆ, ಡಾ.ಪ್ರದೀಪ್ ಕುಮಾರ್ ಹೆಬ್ರಿ, ಗಿರಿದಾಸ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.