ಮಂಡ್ಯ ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಶ್ರೀಮಲೈ ಮಹದೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ ಆಯೋಜಿಸಿದ್ದ ಶ್ರೀ ಮಲೈ ಮಹದೇಶ್ವರಸ್ವಾಮಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಮತ್ತು ದೇವಾಲಯದ ಉದ್ಘಾಟನಾ ಸಮಾರಂಭ ಸಂಭ್ರಮದಿಂದ ನಡೆಯಿತು.
ದೇವಸ್ಥಾನಕ್ಕೆ ಆಗಮಿಸಿದ ಭಕ್ತ ಸಮೂಹ ಮತ್ತು ಗ್ರಾಮಸ್ಥರು ವಿಶೇಷಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಭೇಟಿ ನೀಡಿದ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ನಾನು ಎಲ್ಲೇ ಹೋದರೂ ಪದೇ ಪದೇ ಹೇಳ್ತಿನಿ, ನಿಮ್ಮ ಪ್ರೀತಿಯ ಆಶೀರ್ವಾದಿಂದ ನಾನು ಸಂಸದೆಯಾಗಿದ್ದೀನಿ.ನನಗೆ ಯಾವ ಅಭಿವೃದ್ಧಿ ಕಾರ್ಯ ಮಾಡಬೇಕು ಎನ್ನುವುದು ತಿಳಿದಿದೆ ಎಂದರು.
ರಾಜಕಾರಣದ ದೃಷ್ಠಿಯಿಂದ ನೋಡಿಕೊಂಡು ನಾನು ಅಭಿವೃದ್ದಿ ಕಾರ್ಯಗಳನ್ನು ಮಾಡಲ್ಲ, ಮಂಡ್ಯದ ಇತಿಹಾಸದಲ್ಲಿ ಪಕ್ಷೇತರ ಸಂಸದೆಯಾಗಿ ನೀವು ಗೆಲ್ಲಿಸಿದ್ದೀರಿ, ಎಂದಿದಿಗೂ ಋಣಿಯಾಗಿರುವೆ ಎಂದರು.
ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಪುಣ್ಯದ ಕಾರ್ಯ ನೆರವೇರಿದೆ, ಆ ದೇವರು ಎಲ್ಲರಿಗೂ ಆಶೀರ್ವಾದ ಮಾಡಲಿ ಎಂದು ಕೋರುತ್ತೇನೆ ಎಂದರು.
ಬಳಿಕ ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಟ್ರಸ್ಟ್ ಉಪಾಧ್ಯಕ್ಷ ವಾಣೀಶ್ ಬಾಬು ಮಾತನಾಡಿ, ಎರಡು ದಿನಗಳ ಕಾಲ ದೇವತಾ ಕಾರ್ಯಗಳು ಸುಗಮವಾಗಿ ಸಂಪನ್ನಗೊಂಡಿವೆ. ಮಲೈ ಮಹದೇಶ್ವರಸ್ವಾಮಿ ದೇವಾಲಯ ಜೀರ್ಣೋದ್ದಾರ ಮತ್ತು ದೇವರ ವಿಗ್ರಹ ಪ್ರತಿಷ್ಠಾಪನೆ ಎಲ್ಲಾ ಗ್ರಾಮಸ್ಥರ ಮತ್ತು ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ಮನ್ಮುಲ್ ಅಧ್ಯಕ್ಷ ರಾಮಚಂದ್ರು, ಕಾಂಗ್ರೆಸ್ ಮುಖಂಡ ಡಾ.ಕೃಷ್ಣ, ಜಿ.ಪಂ.ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಅಮರಾವತಿ ಚಂದ್ರಶೇಖರ್, ಟ್ರಸ್ಟ್ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಹೊನ್ನೇಶ್, ಖಜಾಂಚಿ ಟಿ.ನಾಗರಾಜು, ಗ್ರಾ.ಪಂ. ಅಧ್ಯಕ್ಷ ಸಿದ್ದೇಗೌಡ ಮತ್ತು ಪದಾಧಿಕಾರಿಗಳು, ಯಜಮಾನರು, ಗ್ರಾಮದ ಯುವ ಮುಖಂಡರು ಹಾಜರಿದ್ದರು.