ಗ್ರಾಮೀಣ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿ ಕೌಶಲ್ಯದ ಶಿಕ್ಷಣ ಪಡೆದು ಉನ್ನತ ಹುದ್ದೆಗೇರುವ ಸಾಧನೆ ಮಾಡಬೇಕೆಂದು ಶಾಸಕ ಎಂ.ಶ್ರೀನಿವಾಸ್ ಸಲಹೆ ನೀಡಿದರು.
ಮಂಡ್ಯ ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿ.ಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದಕ್ಷಿಣ ವಲಯ ಆಯೋಜಿಸಿದ್ದ ಕಲಿಕಾ ಚೇತರಿಕೆ ವರ್ಷ 2022-23 ನೇ ಸಾಲಿನ ಗೋಪಾಲಪುರ ಕ್ಲಸ್ಟರ್ ಹಂತದ ಕಲಿಕಾ ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರಿ ಮಾತನಾಡಿದರು.
‘ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು’ ಎಂಬಂತೆ ವಿದ್ಯಾರ್ಥಿಗಳು ಉತ್ತಮವಾಗಿ ಕೌಶಲ್ಯತೆಯಿಂದ ಕಲಿತರೆ ಪ್ರತಿಭಾವಂತರಾಗುತ್ತಾರೆ.ಮಕ್ಕಳ ಜ್ಞಾನಾರ್ಜನೆಗೆ ಇಂತಹ ಕಲಿಕಾ ಹಬ್ಬ ಕಾರ್ಯಕ್ರಮ ಅತ್ಯವಶ್ಯಕ. ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡುವ ಮೂಲಕ ಉನ್ನತ ಮಟ್ಟದಲ್ಲಿ ಸಾಧನೆ ಮಾಡಬೇಕು.ಆ ಮೂಲಕ ಶಾಲೆಗೆ,ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕೆಂದು ನುಡಿದರು.
ಬಳಿಕ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತಾ ಮಾತನಾಡಿ, 2 ದಿನಗಳ ಕಲಿಕಾ ಹಬ್ಬದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಾಕಷ್ಟು ಪಾಲ್ಗೊಂಡು ಸಂಭ್ರಮಿಸಿ ಕಲಿತಿದ್ದೀರಿ. ಜಿಲ್ಲಾ ಮಟ್ಟದ ಕಲಿಕಾ ಹಬ್ಬ ಸಮಾರಂಭವು ಶೀಘ್ರ ಶುರುವಾಗಲಿದೆ. ಅಲ್ಲಿ ಉತ್ತಮ ರೀತಿಯಲ್ಲಿ ಮತ್ತಷ್ಟು ಸಂಭ್ರಮ, ಕಲಿಕೆ ನಿಮ್ಮದಾಗುತ್ತದೆ ಎಂದು ಹೇಳಿದರು.
ಕಲಿಕಾ ಚೇತರಿಕೆ ವರ್ಷದಲ್ಲಿ ಕಲಿಕೆಯನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸಿ ಕಲಿಯುತ್ತಿದ್ದೀರಿ. ವಿವಿಧ ಶಾಲೆಗಳಿಂದ ಕ್ಲಸ್ಟರ್ ಹಂತದ ಶಾಲೆಯಲ್ಲಿ ಆಯೋಜನೆಗೊಂಡಿದೆ, 120 ವಿದ್ಯಾರ್ಥಿಗಳು ಆಯ್ಕೆಯಾಗಿದ್ದವರು ಪಾಲ್ಗೊಂಡಿದ್ದೀರಿ,ವಿವಿಧ ರೀತಿಯ ಕೌಶಲ್ಯತೆಯ ಕಲಿಕೆಗಳನ್ನು ಅರಿತೊಂಡಿದ್ದೀರಿ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ 2 ದಿನಗಳ ಕಾಲ ವಿವಿಧ ಶಾಲಾ ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ತರಬೇತಿ ಪಡೆದ ಕಲಿಕಾ ವಿಜ್ಞಾನ, ಕೌಶಲ್ಯತೆ, ವೈಜ್ಞಾನಿಕ ಗಣಿತ, ಹಾಡುಗಳನ್ನು ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕಿ ಲಕ್ಷ್ಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬೋರೇಗೌಡ, ವಿಶ್ವ, ಮಮತಾ, ಗೀತಾ, ಮುಖ್ಯಶಿಕ್ಷಕ ಆರ್.ದೇವರಾಜು, ಎಚ್.ಎನ್,.ದೇವರಾಜ್, ಶಾಲಾಭಿವೃದ್ದಿ ಅಧ್ಯಕ್ಷ ಮಹೇಶ್, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಚಿಕ್ಕನಾಗೇಗೌಡ ಮತ್ತು ಶಿಕ್ಷಕರು ಹಾಜರಿದ್ದರು.