ಕೊಬ್ಬರಿಗೆ ಬೆಂಬಲ ಬೆಲೆ,ಭತ್ತ,ರಾಗಿಗೆ ಸೂಕ್ತ ಮಾರುಕಟ್ಟೆ ಕಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.3 ರಂದು ರಾಜ್ಯ ರೈತಸಂಘ (ಮೂಲ ಸಂಘಟನೆ)ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ತಾಲ್ಲೂಕು ಅಧ್ಯಕ್ಷ ದೊಡ್ಡಘಟ್ಟ ಸುರೇಶ್ ತಿಳಿಸಿದರು.
ನಾಗಮಂಗಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಕೊಬ್ಬರಿ ಬೆಲೆ ಕಳೆದ ವರ್ಷ 18,000 ರೂ. ಇದ್ದಿದ್ದು ಪ್ರಸ್ತುತ 10,600 ರೂ.ಇದೆ. ಕೊಬ್ಬರಿ ಬೆಲೆ ಇಳಿಕೆಯಿಂದಾಗಿ ಸಣ್ಣ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ. ಸರ್ಕಾರ ಕೂಡಲೇ ಕೊಬ್ಬರಿಗೆ ಸೂಕ್ತ ಬೆಂಬಲ ಬೆಲೆಯನ್ನು ನಿಗದಿ ಗೊಳಿಸಿ ನ್ಯಾಪಿಡ್ ಕೇಂದ್ರಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.
ಜೊತೆಗೆ ವಿದ್ಯುತ್,ಹಾಲು ಇತರ ಕ್ಷೇತ್ರಗಳ ಖಾಸಗೀಕರಣ ಮಾಡಿರುವುದನ್ನು ಕೂಡಲೇ ರದ್ದು ಗೊಳಿಸಬೇಕು. ರಾಗಿ,ಭತ್ತದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಿ ಸೂಕ್ತ ಬೆಂಬಲ ಬೆಲೆಯನ್ನು ಸರ್ಕಾರವೇ ನಿಗದಿ ಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.ಈ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ರೈತರು ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ.ಆದ್ದರಿಂದ ಕೂಡಲೇ ಸರ್ಕಾರ ಎಚ್ಚೆತ್ತು ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿ ಗೊಳಿಸಿ ನ್ಯಾಪಿಡ್ ಕೇಂದ್ರಗಳನ್ನು ತೆರೆಯಬೇಕು. ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆಬ್ರವರಿ 3 ರ ಶುಕ್ರವಾರದಂದು ಸರ್ಕಾರದ ವಿರುದ್ಧ ತಾಲೂಕಿನ ಬಿ ಜಿ ಎಸ್ ಸರ್ಕಲ್ ನಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ವೆಂಕಟೇಶ್,ಕಾರ್ಯಾಧ್ಯಕ್ಷ ಜಿ.ಟಿ.ಹರೀಶ್.ಉಪಾಧ್ಯಕ್ಷ ಕೆ.ಜೆ.ಯೋಗೇಶ್.ಬೆಳ್ಳೂರು ಹೋಬಳಿ ಮಟ್ಟದ ಅಧ್ಯಕ್ಷ ಪಾಪಣ್ಣ, ಖಜಾಂಚಿ ಬೋರೇಗೌಡ, ಕಾರ್ಯದರ್ಶಿ ದೇವರಾಜು ಉಪಸ್ಥಿತರಿದ್ದರು.