✍️ ಚೇತನ್ ಕಾಗೇಪುರ
ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸುವ ಭರದದಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಟ್ರಾಕ್ಟರ್ ಮೇಲೆ ಕೂರಿಸಿ ಊರೆಲ್ಲ ಮೆರವಣಿಗೆ ಮಾಡಿಸಿ, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲಿನಲ್ಲಿ ನಡೆದಿದ್ದು, ಇದು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಕಿರುಗಾವಲಿನ ಆದರ್ಶ ಏಜುಕೇಷನ್ ಸೊಸೈಟಿಯ ಆಡಳಿತ ಮಂಡಳಿಯವರು ಪ್ರಚಾರ ಗಿಟ್ಟಿಸುವ ಉದ್ಧೇಶದಿಂದ ಏನೂ ಅರಿಯದ ಪುಟ್ಟ ಕಂದಮ್ಮಗಳನ್ನು ತೆರೆದ ಟ್ರಾಕ್ಟರ್ ನಲ್ಲಿ ಕೂರಿಸಿಕೊಂಡು ಊರೆಲ್ಲ ಸುತ್ತಾಡಿಸುವ ಮೂಲಕ ಮಕ್ಕಳ ಪೋಷಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಶಾಲೆಯೂ ಅಗ್ಗದ ಪ್ರಚಾರ ಪಡೆಯುವ ಉದ್ದೇಶದಿಂದ ಮಕ್ಕಳನ್ನು ಬಳಸಿಕೊಂಡಿದೆ, ಅಲ್ಲದೇ ಯಾವುದೇ ಸುರಕ್ಷತೆ ಇಲ್ಲದಿರುವ ಟ್ರಾಕ್ಟರ್ ನಲ್ಲಿ ಮಕ್ಕಳನ್ನು ಕೂರಿಸಿ, ಪುಟ್ಟ ಕಂದಮ್ಮಗಳ ಜೀವದ ಜೊತೆ ಚೆಲ್ಲಾಟವಾಡುವುದು ಸರಿಯೇ ? ಎಂಬುದು ಪ್ರತ್ಯಕ್ಷದರ್ಶಿಗಳ ಪ್ರಶ್ನೆಯಾಗಿದೆ. ಟ್ರಾಕ್ಟರ್ ಮೇಲೆ ಸುತ್ತಲೂ ಕುಳಿತಿರುವ ಮಕ್ಕಳನ್ನು ಬಿದ್ದು ಹೋಗುತ್ತಾರೆಂದು ಹಿಡಿದುಕೊಳ್ಳಲು ಶಿಕ್ಷಕಿಯರಿಬ್ಬರು ಹರಸಾಹಸ ಪಡುತ್ತಿರುವ ದೃಶ್ಯ ಜನಸಾಮಾನ್ಯರಿಗೆ ಸಿಟ್ಟು ತರಿಸುವಂತಿತ್ತು. ಇದನ್ನು ಸುತ್ತಲು ನಿಂತ ಸಾರ್ವಜನಿಕರು ನಿಂತು ನೋಡುತ್ತಾ ಶಾಲಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಕಿರುಗಾವಲು ಪೊಲೀಸ್ ಸ್ಟೇಷನ್ ಮುಂಭಾಗದಲ್ಲೆ ಟ್ರಾಕ್ಟರ್ ನ ಮೆರವಣಿಗೆ ಸಾಗುತ್ತಿದ್ದರೂ ಕನಿಷ್ಠ ಪೊಲೀಸರು ಸಹ ಶಿಕ್ಷಕನ್ನು ಎಚ್ಚರಿಸುವ ಕೆಲಸ ಮಾಡಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಟ್ರಾಕ್ಟರ್ ಗಳನ್ನು ಬೇರೆ ಉದ್ದೇಶಕ್ಕೆ ಬಳಸಿದರೆ ದಂಡ ಹಾಕುವ ಪೊಲೀಸರು, ಇಂತಹದನ್ನೆಲ್ಲ ನೋಡಿಕೊಂಡು ಹೇಗೆ ಮೌನವಹಿಸಿದ್ದಾರೆ ? ಟ್ರಾಕ್ಟರ್ ನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವುದಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ತೆಗೆದುಕೊಳ್ಳಲಾಗಿತ್ತೆ ? ಎಂಬುದಕ್ಕೆ ಶಾಲೆಯ ಆಡಳಿತ ಮಂಡಳಿಯೇ ಉತ್ತರಿಸಬೇಕಿದೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವ ಇಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಇಂತಹ ಅಪಾಯಕಾರಿ ಕೆಲಸಗಳಿಗೆ ಕಡಿವಾಣ ಹಾಕಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.