ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ಅವರನ್ನು ನೇಮಕ ಮಾಡಿರುವ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸಿಟ್ಟಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಅಶೋಕ್ ಎಂದು ಕಿಡಿಕಾರಿ ಪೋಸ್ಟ್ ಗಳನ್ನು ಹಾಕಿದ್ದಾರೆ.
ಇದುವರೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಗೋಪಾಲಯ್ಯ ಅವರನ್ನು ಚುನಾವಣೆಗೆ ಎರಡು ತಿಂಗಳಿರುವಾಗ ಏಕಾಏಕಿ ಅವರನ್ನು ತೆರವು ಗೊಳಿಸಿ ಆರ್.ಅಶೋಕ್ ನೇಮಕ ಮಾಡಿರುವುದು ಜೆಡಿಎಸ್ ಜೊತೆಗೆ ಹೊಂದಾಣಿಕೆಯ ಕಾರಣಕ್ಕಾಗಿ ಎಂದು ಸ್ವಪಕ್ಷೀಯ ಕಾರ್ಯಕರ್ತರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ಗೋ ಬ್ಯಾಕ್ ಅಶೋಕ್ ಅಭಿಯಾನ ಆರಂಭವಾಗಿದ್ದು, ಬಿಜೆಪಿ ಕಾರ್ಯಕರ್ತರು ಅಶೋಕ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಸಹಿಸುವುದಿಲ್ಲ.
ನಾವು ಬಿಜೆಪಿ ಕಾರ್ಯಕರ್ತರು. ಗೋ ಬ್ಯಾಕ್ ಆರ್.ಅಶೋಕ್, ಮಂಡ್ಯದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮಂಡ್ಯದ ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರೇ ಸಾಕು, ಬಿಟಿಎಂ ಲೇ ಔಟ್, ಜಯನಗರ, ಪದ್ಮನಾಭನಗರದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ನೀವು, ದಯವಿಟ್ಟು ಹೊಂದಾಣಿಕೆ ಮಾಡುವುದನ್ನು ಬಿಟ್ಟು ಮಂಡ್ಯದಿಂದ ವಾಪಸ್ ಹೋಗಿ, ಡಿಕೆ, ಎಚ್ಡಿಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಅಶೋಕ್ ನಾಲಾಯಕ್, ಕುಮಾರಸ್ವಾಮಿ ಅನುಕೂಲಕ್ಕಾಗಿ ಉಸ್ತುವಾರಿ ಸಚಿವರನ್ನಾಗಿ ಮಂಡ್ಯಕ್ಕೆ ಅಶೋಕ್ ಹಾಕಲಾಗಿದೆ. ಬಿಜೆಪಿ ಕಥೆ ಮಂಡ್ಯ ಜಿಲ್ಲೆಯಲ್ಲಿ ಮುಗೀತಿ ಎಂದೆಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.