ತುಮಕೂರು ನಗರ ಅಶೋಕ ರಸ್ತೆಯ ಸ್ವಾತಂತ್ರ್ಯ ಚೌಕದಲ್ಲಿ ಗಣರಾಜ್ಯೋತ್ಸವ ದಿನದಂದು ತ್ರಿವರ್ಣ ಧ್ವಜ ಹಾರಾಟ ಮಾಡಬೇಕಾದ ಜಾಗಗಳಲ್ಲಿ ಕೇಸರಿ ಧ್ವಜ ಹಾರಿಸಿಲಾಗಿದೆ.
ಹಿಂದುತ್ವವಾದಿ ಕೋಮು ಸಂಘಟನೆಗಳು ಕೇಸರಿ ಧ್ವಜ ಹಾರಿಸಿವೆ ಎಂದು ಆರೋಪಿಸಲಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂವಿಧಾನ ಜಾರಿಯಾದ ದಿನವನ್ನು ಗಣರಾಜ್ಯೋತ್ಸವವಾಗಿ ದೇಶಾದ್ಯಂತ ಆಚರಿಸಲಾಗುತ್ತದೆ.
ಜಾತಿ, ಮತ, ಧರ್ಮ, ಭಾಷೆಗಳ ನಡುವೆ ತಾರತಮ್ಯವಿಲ್ಲದೆ ನಾವೆಲ್ಲರೂ ಭಾರತೀಯರೆಂದು ಸಾರುವಂತಹ ದಿನವಾಗಿದೆ. ಆದರೆ, ಕೆಲವು ಸಂಘಟನೆಗಳು ದುರುದ್ದೇಶದಿಂದ ಗಣರಾಜ್ಯೋತ್ಸವ ದಿನದಂದು ತ್ರಿವರ್ಣ ಧ್ವಜದ ಬದಲಿಗೆ ಕೇಸರಿ ಧ್ವಜವನ್ನು ಹಾರಿಸಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಹೋರಾಟಗಾರ ಯತಿರಾಜ್ ಮಾತನಾಡಿ, “ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದವರು ಹಾಗೂ ಸದಾ ದ್ವೇಷವನ್ನೇ ಬಿತ್ತುವ ಮತಾಂಧ ಶಕ್ತಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಪ್ರತಿಯೊಂದು ವಿಷಯದಲ್ಲೂ ದ್ವೇಷ ಬಿತ್ತುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು” ಎಂದರು.
ನಗರದ ಸ್ವಾತಂತ್ರ್ಯ ಚೌಕದಲ್ಲಿ ಕೇಸರಿ ಧ್ವಜ, ಬಂಟಿಂಗ್ಸ್ ಹಾಕುವ ಮೊದಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯವು ಸಾರ್ವಜನಿಕ ವಲಯದಲ್ಲಿ ಹೇಗೆಲ್ಲ ಗೊಂದಲ ಸೃಷ್ಟಿಯಾಗುತ್ತದೆ ಹಾಗೂ ಮತಾಂಧ ಶಕ್ತಿಗಳಿಗೆ ಹೇಗೆ ಪೂರಕವಾಗಿರುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.