ಹದಿಹರೆಯದಲ್ಲಿ ಹೆಣ್ಣು ಮಕ್ಕಳಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ, ಭಾವನಾತ್ಮಕವಾಗಿ ಇನ್ನು ಅನೇಕ ಬದಲಾವಣೆಗಳು ಉಂಟಾಗುತ್ತವೆ, ಈ ಸಂದರ್ಭದಲ್ಲಿ ಅವರು ದೇಹದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕಾದ ಅವಶ್ಯಕತೆ ಇರುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಹೇಳಿದರು.
ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ “ಹದಿಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮ” ಉದ್ದೇಶಿಸಿ ಮಾತನಾಡಿದರು.
10 ರಿಂದ 19 ವಯಸ್ಸಿನ ವಯಸ್ಸು ಇದು ಬಾಲ್ಯಾವಸ್ಥೆಯಿಂದ ತಾರುಣ್ಯಕ್ಕೆ ಮಾರ್ಪಾಡಾಗುವ ಮಧ್ಯದ ಕಾಲಘಟ್ಟ, ಇದು ತಾರುಣ್ಯವನ್ನು ತಲುಪಲು ಬೇಕಾದ ಎಲ್ಲಾ ತಯಾರಿ ನಡೆಯುವ ಕಾಲ ಅಂದರೆ ದೈಹಿಕ ಮಾನಸಿಕ ಹಾಗೂ ಭಾವನೆಗಳಲ್ಲಿ ಬದಲಾವಣೆ ಪಡೆದು ಮುಂದಿನ ಘಟ್ಟದಲ್ಲಿ ಮದುವೆಯಾಗಿ ತಾಯಿಯಾಗುವ ಮಹತ್ವದ ಕಾಲ ಇದಾಗಿದ್ದು ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಆರೋಗ್ಯದ ಕಡೆ ಗಮನಹರಿಸಬೇಕಾದ ಅವಶ್ಯಕತೆ ಇರುತ್ತದೆ ಆದ್ದರಿಂದ ಆರೋಗ್ಯವಂತ ಹದಿಹರೆಯದವರು ಆರೋಗ್ಯವಂತ ವಯಸ್ಕರಾಗಬೇಕು ಹೆಣ್ಣು ಮಕ್ಕಳು ಓದು ಸೇರಿದಂತೆ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
ಪ್ರಭಾರಿ ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ ಮಂಗಳ ಮಾತಾನಾಡಿ, ವೈಯಕ್ತಿಕ ಸ್ವಚ್ಛತೆ, ರಕ್ತ ಹೀನತೆಯ ನಿಯಂತ್ರಣಕ್ಕಾಗಿ ಅನಿಮಿಯಾ ಮುಕ್ತ ಭಾರತ ಹಾಗೂ ಸ್ಥಳೀಯವಾಗಿ ದೊರೆಯುವ ಪೋಷಕಾಂಶ ಯುಕ್ತ ಆಹಾರ ಸೇವನೆ ಕುರಿತು ವಿವರವಾಗಿ ತಿಳಿಸಿದರು. ಏನಾದರೂ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಪ್ರತಿ ಗುರುವಾರ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಮಧ್ಯಾನ್ಹ 3 ಗಂಟೆಯಿಂದ 5 ಗಂಟೆ ವರೆಗೆ ಸ್ನೇಹ ಕ್ಲಿನಿಕ್ ನಲ್ಲಿ ಹದಿಹರೆಯದವರಿಗಾಗಿ ಸೇವೆ ನೀಡಲಾಗುತ್ತಿದ್ದು, ಭೇಟಿ ನೀಡಿ ಸೇವೆ ಪಡೆಯಬಹುದೆಂದು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ವಿದ್ಯಾರ್ಥಿನಿಯರು ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸಂವಾದದ ಮೂಲಕ ಚರ್ಚಿಸಿದರು. ಈ
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಿದ್ದರಾಜು ಎಂ ಎಸ್, ಉಪನ್ಯಾಸಕರಾದ ಧನಂಜಯ್, ಶಿಲ್ಪಾಶ್ರೀ, ನಾಗರತ್ನ, ಪವಿತ್ರ, ಸೌಮ್ಯ ಹಾಜರಿದ್ದರು.