ಬಾಲ್ಯ ವಿವಾಹ ಮುಕ್ತ ಜಿಲ್ಲೆಯನಾಗಿಸುವುದೇ ಎಲ್ಲರ ಸಂಕಲ್ಪವಾಗಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಆರ್ ನಾಗರಾಜ್ ಹೇಳಿದರು.
ಮಂಡ್ಯ ನಗರದಲ್ಲಿರುವ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮಂಡ್ಯ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ “ಬಾಲ್ಯ ವಿವಾಹ ನಿಷೇಧ” ಕುರಿತು ನಡೆದ ಭಾಗಿದಾರ ಇಲಾಖೆಗಳ ಅಧಿಕಾರಿಗಳಿಗೆ ತರಬೇತಿ ಹಾಗೂ ಅಕ್ಷಯ ತೃತೀಯ ದಿನದಂದು ಬಾಲ್ಯ ವಿವಾಹವನ್ನು ತಡೆಗಟ್ಟುವ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ಜಾಸ್ತಿಯಾಗುತ್ತಿವೆ, ಎಷ್ಟೇ ಕ್ರಮಕೈಗೊಂಡರು, ಅರಿವು ಮೂಡಿಸುತ್ತಿದ್ದರೂ ಹೆಚ್ಚಾಗುತ್ತಿದೆ, ಒಂದೇ ಇಲಾಖೆಯಿಂದ ಸಾಧ್ಯವಿಲ್ಲ, ಆದ್ದರಿಂದ ಬಾಲ್ಯ ವಿವಾಹ ನಿಷೇಧ ಕುರಿತ ಭಾಗಿದಾರ ಇಲಾಖೆಗಳ ಸಹಕಾರವೂ ಅಗತ್ಯವಿದೆ, ಎಲ್ಲರೂ ಸಹಭಾಗಿತ್ವದಿಂದ ಮಂಡ್ಯವನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸು ಸಂಕಲ್ಪ ಮಾಡೋಣ ಎಂದು ನುಡಿದರು.
ಕಳೆದ ವರ್ಷದಲ್ಲಿ ಬಾಲ್ಯ ವಿವಾಹ ನಡೆಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗಿದೆ, ಸಾಕಷ್ಟು ಮಾಹಿತಿ ನೀಡಿದ್ದೇವೆ, ಎಫ್ಐಆರ್ ಹಾಕಲಾಗಿದೆ, ಮತ್ತೆ ಅಕ್ಷಯ ತೃತಿಯ ದಿನ ಬರುತ್ತಿದೆ ಹಾಗೂ ವಿಧಾನಸಭಾ ಚುನಾವಣೆ ಬರುತ್ತಿದೆ, ಎಲ್ಲರೂ ಅತ್ತಕಡೆ ಗಮನವಿರುತ್ತದೆ ಎಂದು ಜನರು ಬಾಲ್ಯವಿವಾಹ ನಡೆಸಲು ಮುಂದಾಗುತ್ತಾರೆ, ಆದ್ದರಿಂದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದರು.
ಕಾರ್ಯಾಗಾರದಲ್ಲಿ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ, ತರಬೇತಿ ನೀಡಲಾಯಿತು. ಎಲ್ಲರ ಸಹಭಾಗಿತ್ವದಲ್ಲಿ ಬಾಲ್ಯವಿವಾಹ ಮುಕ್ತ ಜಿಲ್ಲೆ, ರಾಜ್ಯ ದೇಶವನ್ನಾಗಿಸೋಣ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಲಕ್ಷ್ಮಿ ಪ್ರಸನ್ನ, ಸರಸ್ವತಿ, ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷಕ ದೇವರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರಸ್ವಾಮಿ, ದುದ್ದ ಹೋಬಳಿ ಶಿಶು ಅಭಿವೃದ್ಧಿ ಅಧಿಕಾರಿ ಯೋಗೇಶ್, ಆರೋಗ್ಯ ಇಲಾಖೆಯ ಡಾ.ರವೀಂದ್ರ ಬಿ ಗೌಡ ಹಾಜರಿದ್ದರು.