-
50 ದಿನ ಪೂರೈಸಿದ ಅನಿರ್ಧಿಷ್ಟಾವದಿ ಧರಣಿ ಸತ್ಯಾಗ್ರಹ
- ಬಾಕಿ ವೇತನ ಪಾವತಿಗೆ ಆಗ್ರಹಿಸಿ ಕಾರ್ಖಾನೆ ನೌಕರರ ಪಟ್ಟು
ನಿವೃತ್ತ ಮತ್ತು ಹಾಲಿ ನೌಕರರಿಗೆ ಬರಬೇಕಾದ 36 ತಿಂಗಳ 50% ಬಾಕಿ ವೇತನ, ರಜಾ ವೇತನ, ಶಾಸನಬದ್ಧ ಬೋನಸ್, 6ನೇ ಮತ್ತು 7ನೇ ತ್ರಿಪಕ್ಷೀಯ ಮಂಡಳಿಯ ಹಿಂಬಾಕಿ ಮತ್ತು ಭವಿಷ್ಯ ನಿಧಿ ವಂತಿಕೆ ಹಣ ಕೊಡಿಸಿಕೊಡುವಂತೆ ಒತ್ತಾಯಿಸಿ ಪಿಎಸ್ಸೆಸ್ಕೆ ಎಂಪ್ಲಾಯೀಸ್ ಅಸೋಸಿಯೇಷನ್ ನಡೆಸುತ್ತಿರುವ ಅನಿರ್ದಿಷ್ಟಾವದಿ ಉಪವಾಸ ಸತ್ಯಾಗ್ರಹ 50 ದಿನಗಳನ್ನು ಪೂರೈಸಿದ್ದು, ತಮ್ಮ ಬೇಡಿಕೆ ಈಡೇರಿಕೆಗಾಗಿ ನೌಕರರು ಬುಧವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಮೆ.ಎಂ.ಆರ್.ಎನ್.ಶುಗರ್ ಮತ್ತು ಬಯೋರಿಫೈನರ್ ಮುಧೋಳ ರವರಿಗೆ (ಮುರುಗೇಶ್ ಆರ್.ನಿರಾಣಿ ಸಂಸ್ಥೆ) ಸುಮಾರು 40 ವರ್ಷಕ್ಕೆ ಗುತ್ತಿಗೆ ನೀಡಿದ್ದು, ಈ ಮುರುಗೇಶ್ ಆರ್.ನಿರಾಣಿ ಕಂಪನಿಯವರು ಜೂನ್ 2020ರಲ್ಲಿ ಕಾರ್ಮಿಕ ಮುಖಂಡರ ಜತೆ ಸಭೆ ನಡೆಸಿ, ಎಲ್ಲಾ ಬಾಕಿವೇತನವನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರೂ, ಆದರೆ ಇದೂವರೆಗೆ ಪಾವತಿ ಮಾಡಿಲ್ಲ ಎಂದು ದೂರಿದರು.
ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ರೈತರಿಗೆ ಹಾಗೂ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸುವ ಆಶ್ವಾಸನೆ ಕೊಟ್ಟಿದ್ದರು. ಹೀಗಾಗಿ ಕಾರ್ಮಿಕರು ಪುನರ್ಜೀವ ಬಂದಂತಾಗಿತ್ತು. ಈ ವೇಳೆ ಎಲ್ಲಾ ಕಾರ್ಮಿಕರುಗಳು ತುಂಬಾ ಶ್ರಮ ವಹಿಸಿ 2020ನೇ ಸಾಲಿನಲ್ಲಿ ಸುಮಾರು 3 1,70,000, 2021 4,60,000 ಟನ್ ಮತ್ತು 2022ನೇ ಸಾಲಿನಲ್ಲಿ 3,30,000 ಕಬ್ಬು ನುರಿಸಿದ್ದರು. ಆದರೆ ನಿರಾಣಿ ಕಂಪನಿಯೂ ನೌಕರರಿಗೆ ನ್ಯಾಯಯುತವಾಗಿ ಬರಬೇಕಾದ ಬಾಕಿಯನ್ನು ನೀಡದೆ ವಂಚಿಸುತ್ತಿದೆ ಎಂದು ದೂರಿದರು.
ನಿವೃತ್ತಿಯಾದ ನೌಕರರಲ್ಲಿ ಕೆಲವರು ಜೀವನ ನಡೆಸಲು ಸಾಧ್ಯವಾಗದೇ ನಿಧನ ಹೊಂದಿದ್ದಾರೆ. ಕೆಲವರು ಆರ್ಥಿಕ ದುಸ್ಥಿತಿಯಿಂದ ಖಿನ್ನತೆಗೆ ಒಳಗಾಗಿರುತ್ತಾರೆ. ಹಾಲಿ ಇರುವ ಕಾರ್ಮಿಕರಿಗೆ ಬಾಕಿ ಹಣವು ದೊರೆಯುತ್ತಿಲ್ಲ ಎಂದು ನೌಕರರು ಅಳಲು ತೋಡಿಕೊಂಡರು.
ಸತ್ಯಾಗ್ರಹದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಡಿ.ಚಿಕ್ಕಯ್ಯ, ಉಪಾಧ್ಯಕ್ಷ ಪುಟ್ಟಮಾದೇಗೌಡ, ಕಾರ್ಯದರ್ಶಿ ಡಿ.ಲೋಕೇಶ್, ಸಹ ಕಾರ್ಯದರ್ಶಿ ಎಂ.ಜೆ.ಉಮೇಶ್ ಬಾಬು, ಖಜಾಂಚಿ ಸಿದ್ದೇಗೌಡ, ಕಾರ್ಮಿಕ ಮುಖಂಡರಾದ ಬೇವಿನಕುಪ್ಪೆ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.