- ಶಿವರಾಮೇಗೌಡ ಕಂದಾಯ ಸಚಿವ ಆರ್ ಅಶೋಕ್ ರವರ ಕಛೇರಿಯಲ್ಲಿ ಹೊರಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ.
- ಇದು ನನ್ನ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ : ಆರ್.ಟಿ.ಐ. ಕಾರ್ಯಕರ್ತ ಕೆ.ಆರ್. ರವೀಂದ್ರ
ಆರ್.ಟಿ.ಐ.ಕಾರ್ಯಕರ್ತ ಕೆ.ಆರ್. ರವೀಂದ್ರ ಇತ್ತೀಚೆಗೆ ಮಂಡ್ಯ ನಗರದ ಸರ್ಕಾರಿ ಜಾಗಗಳ ಅಕ್ರಮ ಪರಭಾರೆ ಹಾಗೂ ಸರ್ಕಾರಿ ಜಾಗವನ್ನೇ ಅಕ್ರಮ ಖಾತೆ ಮಾಡಿಕೊಟ್ಟಿರುವ ಮಂಡ್ಯ ತಾಲ್ಲೂಕು ತಹಶೀಲ್ದಾರ್ ಕುಂಞ ಅಹಮ್ಮದ್.ಎನ್.ಎ ಹಾಗೂ ಅಧೀನ ಸಿಬ್ಬಂದಿ ವಿರುದ್ಧ, ದಾಖಲೆ ಸಮೇತ ದಿನಾಂಕ:15.11.2022 ರಂದು ಕಂದಾಯ ಸಚಿವ ಆರ್.ಅಶೋಕ್ ರವರಿಗೆ ನೇರವಾಗಿ ಖುದ್ದು ಭೇಟಿ ಮಾಡಿ, ಎರಡು ಪ್ರತ್ಯೇಕ ದೂರುಗಳನ್ನು ನೀಡಿದ್ದರು. ಈ ಎರಡು ಪ್ರತ್ಯೇಕ ದೂರುಗಳ ಆಧಾರದ ಮೇರೆಗೆ ಕಂದಾಯ ಸಚಿವ ಆರ್.ಅಶೋಕ್ ರವರು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದರು.
ಈ ಎರಡು ದೂರುಗಳ ಬಗ್ಗೆ ಇತ್ತೀಚೆಗೆ ಕಂದಾಯ ಸಚಿವರ ಆಪ್ತ ಕಾರ್ಯದರ್ಶಿಗಳ ಕಛೇರಿಯಲ್ಲಿ ವಿಚಾರಿಸಲು ಹೋಗಿದ್ದಾಗ, ಶಿವರಾಮೇಗೌಡ ಎನ್ನುವ ಸಿಬ್ಬಂದಿ ತನ್ನ ಮೊಬೈಲ್ನಿಂದ ಕೆ.ಆರ್. ರವೀಂದ್ರರವರ ಫೋಟೋ ತೆಗೆದು ಮಂಡ್ಯ ತಾಲ್ಲೂಕು ತಹಶೀಲ್ದಾರ್ ಮೊಬೈಲಿಗೆ ತಕ್ಷಣ ವಾಟ್ಸಪ್ನಲ್ಲಿ ಕಳುಹಿಸಿದ್ದಾರೆ.
ಈ ಪೋಟೊ ಮಂಡ್ಯ ತಹಶೀಲ್ದಾರ್ ಆಪ್ತನೊಬ್ಬ ಈಗ ವೈರಲ್ ಮಾಡಿದ್ದು, ದಿನಾಂಕ:19-01-2023 ರಂದು ಕೆ.ಆರ್. ರವೀಂದ್ರರ ಗಮನಕ್ಕೆ ಬಂದು, ಹಣದ ಆಮೀಷಕ್ಕೆ ಒಳಗಾಗಿ ತಹಶೀಲ್ದಾರ್ ಪರ ನಿಂತಿರುವ ಮಾನ್ಯ ಕಂದಾಯ ಸಚಿವರ ಆಪ್ತ ಶಾಖೆಯ ಅಧಿಕಾರಿ ಸಿಬ್ಬಂದಿಯನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್ ಆಶೋಕ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾಶರ್ಮ ಅವರಿಗೆ ಕೆ.ಆರ್. ರವೀಂದ್ರ ದೂರು ನೀಡಿದ್ದರು.
ಕೆ.ಆರ್.ರವೀಂದ್ರ ದೂರಿನ ಆಧಾರದ ಮೇಲೆ ಶಿವರಾಮೇಗೌಡ ಎಂಬ ಕಂದಾಯ ಸಚಿವರ ಆಪ್ತ ಶಾಖೆಯ ಅಧಿಕಾರಿ ಸಿಬ್ಬಂದಿಯ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಿ, ಕೆಲಸದಿಂದ ತೆಗೆದುಹಾಕಿದ್ದಾರೆ.
ಈ ಬಗ್ಗೆ ಕೆ.ಆರ್.ರವೀಂದ್ರರವರು ನುಡಿ ಕರ್ನಾಟಕ.ಕಾಮ್ ನೊಂದಿಗೆ ಮಾತನಾಡಿ, ಇದು ನನ್ನ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ ಎಂದು ತಿಳಿಸಿದರು.