ಶ್ರೀರಂಗಪಟ್ಟಣದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ 19 ನೇ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಾಡೋಜ ಭಾಷ್ಯಂ ಸ್ವಾಮೀಜಿ ಅವರನ್ನು ಆಯ್ಕೆ ಮಾಡಬೇಕೆಂದು ಕದಂಬ ಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಬೇಕರಿ ರಮೇಶ್ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾಂಡವಪುರ ತಾಲೂಕು ಮೇಲುಕೋಟೆ ಗ್ರಾಮದವರಾದ ಭಾಷ್ಯಂ ಸ್ವಾಮೀಜಿ ಅವರು ಸಾಹಿತ್ಯ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಸಂಸ್ಕೃತಿ ವಿದ್ವಾಂಸ, ವೇದಶಾಸ್ತ್ರ ಪಂಡಿತ ಭಾಷ್ಯಂ ಸ್ವಾಮೀಜಿ ಅವರು ಹಂಪಿ ವಿವಿಯಿಂದ “ನಾಡೋಜ” ಗೌರವ ಪುರಸ್ಕಾರಕ್ಕೆ ಭಾಜನರಾದ ಮಂಡ್ಯ ಜಿಲ್ಲೆಯ ಮೊದಲ ವ್ಯಕ್ತಿ.ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲು ಅರ್ಹರಾಗಿದ್ದಾರೆ ಎಂದರು.
ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪುರಸ್ಕಾರವನ್ನೂ ಪಡೆದಿದ್ದಾರೆ. ಹೀಗಾಗಿ ಅವರ ಆಯ್ಕೆಯೇ ಸೂಕ್ತ ಎಂದು ಆಯ್ಕೆ ನಿಲುವನ್ನು ಪ್ರತಿಪಾದಿಸಿದರು.
ಹತ್ತಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಭಾಷ್ಯಂ ಸ್ವಾಮೀಜಿ ಮೇಲುಕೋಟೆಯ ಅಕಾಡೆಮಿ ಆಫ್ ಸಂಸ್ಕೃತ ಸಂಶೋಧನಾ ಕೇಂದ್ರದಲ್ಲಿ ಹಿರಿಯ ಸಂಶೋಧನಾ ಸಹಾಯಕರಾಗಿ ದುಡಿದಿದ್ದಾರೆ. ಹೀಗಾಗಿ ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ್ ಹಾಗೂ ಪದಾಧಿಕಾರಿಗಳು ಭಾಷ್ಯಂ ಸ್ವಾಮೀಜಿ ಅವರ ಸಾಧನೆಯನ್ನು ಗಮನಿಸಿ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕದಂಬ ಸೈನ್ಯ ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಮಂಡ್ಯ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಮು ಚಿಕ್ಕೇಗೌಡನದೊಡ್ಡಿ, ಕನ್ನಡಪರ ಹೋರಾಟಗಾರ ಥಾಮಸ್ ಬೆಂಜಮಿನ್ ಕಿಟ್ಟಿ, ರಂಗಭೂಮಿ ಕಲಾವಿದ ಆರಾಧ್ಯ ಗುಡಿಗೇನಹಳ್ಳಿ ಹಾಜರಿದ್ದರು.