ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎಚ್. ಡಿ. ರೇವಣ್ಣ ಅಭ್ಯರ್ಥಿಯಾಗುವ ಪ್ರಶ್ನೆಯೇ ಇಲ್ಲ. ಅವರು ಹೊಳೆನರಸೀಪುರ ಕ್ಷೇತ್ರದ ಮಹಾರಾಜರು. ಅವರು ಅಲ್ಲಿಯೇ ನಿಂತು ಈ ಬಾತಿ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಶಾಸಕ ಸಿ.ಎಸ್. ಪುಟ್ಟರಾಜು ತಿಳಿಸಿದರು.
ಪಾಂಡವಪುರ ಪಟ್ಟಣದ ವಿ. ಸಿ. ಕಾಲೋನಿಯಲ್ಲಿ ಕರ್ನಾಟಕ ಕೊಳಗೇರಿ ಮಂಡಳಿ ವತಿಯಿಂದ ನಡೆದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಎಚ್. ಡಿ. ರೇವಣ್ಣ ಅವರು ಕೆ.ಆರ್. ಪೇಟೆಗೆ ಬರುತ್ತಾರೆ ಎಂಬುದು ಸುಳ್ಳು. ಇನ್ನು ಹಾಸನದಿಂದ ಭವಾನಿ ರೇವಣ್ಣ ಅವರು ಆಕಾಂಕ್ಷಿಯಾಗಿದ್ದು, ಎಚ್. ಡಿ .ದೇವೇಗೌಡರು, ಎಚ್. ಡಿ. ಕುಮಾರಸ್ವಾಮಿ ಹಾಗೂ ರೇವಣ್ಣ ಅವರು ಕೂತು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಯಾವ ಪಾರ್ಟಿಯಲ್ಲಿಲ್ಲ
ಯಾವ ಪಾರ್ಟಿಯಲ್ಲಿ ಇವತ್ತು ಕುಟುಂಬ ರಾಜಕಾರಣ ಇಲ್ಲ ಎಂಬುದನ್ನು ಹೇಳಿ, ಯಡಿಯೂರಪ್ಪನವರ ಇಬ್ಬರು ಮಕ್ಕಳು ರಾಜಕೀಯದಲ್ಲಿ ಇದ್ದಾರೆ. ಈಗ ಅವರ ಮಗಳಿಗೆ ಸೀಟ್ ನೀಡುವ ಹುನ್ನಾರ ನಡೆಯುತ್ತಿದೆ. ಸಿದ್ದರಾಮಯ್ಯನವರ ಮಗನಿಗೆ ಎಂಎಲ್ಎ ಸೀಟ್ ಕೊಟ್ಟಿಲ್ವಾ. ಯಾವ ಪಾರ್ಟಿಯಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದು ಹೇಳಿ ನೋಡೋಣ. ದೇವೇಗೌಡರು, ಕುಮಾರಸ್ವಾಮಿ ಮತ್ತವರ ಕುಟುಂಬದ ಸದಸ್ಯರ ಹೋರಾಟದಿಂದ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಉಳಿಸಿದ್ದಾರೆ ಎಂದರು.
ಭಿನ್ನಮತದ ಪದವೇ ಗೊತ್ತಿಲ್ಲ
ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಭಿನ್ನಮತದ ಪದದ ಗೊತ್ತಿಲ್ಲ. ಕೆ.ಆರ್. ಪೇಟೆ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಎಚ್. ಟಿ. ಮಂಜು ಎಂದು ಘೋಷಣೆ ಮಾಡಿದ್ದಾರೆ. ಬಿ.ಎಲ್. ದೇವರಾಜುರವರಿಗೆ ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿ. ಫಾರಂ ನೀಡುವಾಗ ಇದೆ ನಿಮ್ಮ ಕೊನೆಯ ಚುನಾವಣೆ ಎಂದು ಹೇಳಿ ನೀಡಲಾಗಿತ್ತು. ಕೆ.ಆರ್. ಪೇಟೆ ಕ್ಷೇತ್ರಕ್ಕೆ ಎಚ್.ಟಿ.ಮಂಜಣ್ಣನೇ ಆಕಾಂಕ್ಷಿ ಆಗಬೇಕೆಂದು ಈ ಕ್ಷೇತ್ರದ ಕಾರ್ಯಕರ್ತರು ಅಪೇಕ್ಷೆ ಮಾಡಿದ್ದರು. ಹಾಗಾಗಿ ಅವರಿಗೆ ಟಿಕೆಟ್ ನೀಡಲಾಗಿದೆ. ಬಂಡಾಯ ಎದ್ದಿರುವ ಅಭ್ಯರ್ಥಿಗಳನ್ನು ಸಮಾಧಾನ ಮಾಡುತ್ತೇವೆ ಎಂದು ತಿಳಿಸಿದರು.