ಮಂಡ್ಯ ನಗರದ ಸಮಗ್ರ ಅಭಿವೃದ್ಧಿ, ಮೈಶುಗರ್ ಪುನಶ್ಚೇತನ, ಜಿಲ್ಲೆಯ ಗ್ರಾಮೀಣ ರಸ್ತೆಗಳು ಮತ್ತು ಚರಂಡಿಗಳ ತಲಾ 100 ಕೋಟಿ ರೂ.ನಂತೆ 300 ಕೋಟಿ ರೂ.ಗಳ ವಿಶೇಷ ಅನುದಾನದ ಪ್ಯಾಕೇಜ್ ನೀಡುವಂತೆ ಜಿಲ್ಲಾ ಬಿಜೆಪಿ ಮತ್ತು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೂರು ಪ್ರತ್ಯೇಕ ಪತ್ರಗಳನ್ನು ಬರೆದಿರುವ ಸಿ.ಪಿ.ಉಮೇಶ್ ಅವರು, ಜಿಲ್ಲೆಯಲ್ಲಿನ ಸಮಸ್ಯೆಗಳು, ಅಭಿವೃದ್ಧಿ ಕೆಲಸಗಳು ಮತ್ತವುಗಳಿಗೆ ಬೇಕಾದ ಅನುದಾನದ ಅಗತ್ಯತೆಯನ್ನು ಸಂಕ್ಷೀಪ್ತವಾಗಿ ವಿವರಿಸಿದ್ದಾರೆ.
ಮಂಡ್ಯ ನಗರಸಭೆ ವ್ಯಾಪ್ತಿಯ ರಸ್ತೆಗಳು ತುಂಬಾ ಹಾಳಾಗಿವೆ. ಒಳಚರಂಡಿ ವ್ಯವಸ್ಥೆಯ ಸಮಸ್ಯೆಯೂ ಇದೆ. ಇದರಿಂದ ನಗರದ ಜನರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ 100 ಕೋಟಿ ರೂ. ವಿಶೇಷ ಅನುದಾನ ನೀಡಬೇಕು. ಹಾಗೆಯೇ ಮೈಸೂರು ಸಕ್ಕರೆ ಕಾರ್ಖಾನೆಯು(ಮೈಶುಗರ್) ಮಂಡ್ಯದ ರೈತರ ಜೀವನಾಡಿಯಾಗಿದೆ. ಪ್ರಸ್ತುತ ರೈತರು ಮತ್ತು ಮೈಶುಗರ್ ಕಾರ್ಖಾನೆ ಸಂಕಷ್ಟದಲ್ಲಿde. ಹೀಗಾಗಿ ಮೈಶುಗರ್ಗೆ 100 ಕೋಟಿ ರೂ. ವಿಶೇಷ ಅನುದಾನ ನೀಡಿ, ಅದನ್ನು ಪುನಶ್ಚೇತನಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳು ತೀವ್ರತರದಲ್ಲಿ ಹಾಳಾಗಿವೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಬಹಳ ತೊಂದರೆಯಿದೆ. ರಸ್ತೆಬದಿಯಲ್ಲಿನ ಚರಂಡಿಗಳು, ಅಡ್ಡ ಮೋರಿಗಳು ಹಾಳಾಗಿವೆ. ಗುಂಡಿಗಳಿಂದಾಗಿ ರಸ್ತೆಗಳು ಹಾಳಾಗಿವೆ. ಹೀಗಾಗಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿನ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳು, ಚರಂಡಿಗಳ ಪುನರ್ ನರ್ಮಾಣಕ್ಕೆ 100 ಕೋಟಿ ರೂ. ನೀಡಬೇಕೆಂದು ಮನವಿ ಮಾಡಿದ್ದಾರೆ.