ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ ರೈತ ನಾಯಕ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ 87 ನೇ ಜಯಂತಿ ದಿನವಾದ ಫೆ.13ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ) ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ತಿಳಿಸಿದದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಕೀಟನಾಶಕ ಮುಂತಾದ ವಸ್ತುಗಳ ಬೆಲೆಯನ್ನು ಹೆಚ್ಚಿಸಿರುವ ಕಾರಣ ಕೃಷಿ ಉತ್ಪಾದನಾ ವೆಚ್ಚ ಮತ್ತಷ್ಟು ದುಬಾರಿಯಾಗಿದೆ. ಇದರ ಜೊತೆಗೆ ಆಹಾರ ಪದಾರ್ಥಗಳಿಗೂ ಜಿ.ಎಸ್.ಟಿ. ತೆರಿಗೆ ವಿಧಿಸಿ, ರೈತರ ಕೃಷಿ ಉತ್ಪನ್ನ ಗಳಿಗೆ ನ್ಯಾಯಯುತ ಎಂ.ಎಸ್.ಪಿ.ಬೆಲೆ ನಿಗದಿಪಡಿಸದೆ ಕೃಷಿ ಕ್ಷೇತ್ರವನ್ನು ಕಡೆಗಣಿಸಿ, ರೈತರ ಕೃಷಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ರೈತರ ಹಕ್ಕೊತ್ತಾಯಗಳು
ಕಬ್ಬುಗೆ ಟನ್ ಒಂದಕ್ಕೆ 4500 ರೂ. ಬೆಲೆ ನಿಗದಿ ಮಾಡಬೇಕು.
ಹಾಲಿಗೆ ಲೀಟರ್ ಗೆ 40 ರೂ ಬೆಲೆ ನಿಗದಿ ಮಾಡಬೇಕು.
ರಾಗಿಗೆ ಒಂದು ಕ್ವಿಂಟಾಲ್ ಗೆ 5000 ರೂ. ಹಾಗೂ ಕೊಬ್ಬರಿಗೆ ಕ್ವಿಂಟಾಲ್ 18000 ರೂ. ಬೆಲೆ ನಿಗದಿ ಮಾಡಬೇಕು.
ರಾಜ್ಯ ಸರ್ಕಾರ ಮೂರು ಮಾರಕ ಕೃಷಿ ಕಾಯ್ದೆಗಳನ್ನು ರದ್ದು ಪಡಿಸಬೇಕು.
ಕೇಂದ್ರ ವಿದ್ಯುತ್ ತಿದ್ದುಪಡಿ ಕಾಯ್ದೆ ಕೈ ಬಿಡಬೇಕು.
ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ವಿದ್ಯುತ್ ಬಾಕಿ ಬಲವಂತವಾಗಿ ವಸೂಲು ಮಾಡುವುದನ್ನು ನಿಲ್ಲಿಸಬೇಕು.
ಬೆಲ್ಲ ಹಾಗೂ ಆಹಾರ ಪದಾರ್ಥಗಳ ಮೇಲೆ ನಿಗಧಿ ಪಡಿಸಿರುವ ಜಿ.ಎಸ್.ಟಿ.ಯನ್ನು ಕೈ ಬಿಡಬೇಕು
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ದುಬಾರಿ ಬಡ್ಡಿಯನ್ನು ವಿಧಿಸಿ ಒತ್ತೆ ಇಟ್ಟ ಚಿನ್ನಾಭರಣಗಳನ್ನು ಬಿಡಿಸಿಕೊಳ್ಳಲಾಗದ ಸ್ಥಿತಿಗೆ ತಂದೊಂಡಿದ್ದು ಈ ಸಂಸ್ಥೆಗಳ ಮೇಲೆ ನಿಯಂತ್ರಣ ವಿರಬೇಕು
ಮುಂಬರುವ ಬೇಸಿಗೆ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಕೆರೆ ಕಟ್ಟೆಗಳ ಹೂಳು ತೆಗೆಸಬೇಕು.
ರಾಜ್ಯ ಸರ್ಕಾರ ತಂದಿರುವ ಮಾರಕ ಕೃಷಿ ಕಾಯ್ದೆಗಳು ಕೃಷಿ ಹಾಗೂ ಕೃಷಿ ಉತ್ಪನ್ನಗಳ ಮಾರಾಟವನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸುವ ಕುತಂತ್ರವೇ ಆಗಿದ್ದು, ಈ ಕಾಯ್ದೆಗಳನ್ನು ರದ್ದುಪಡಿಸುವಂತೆ ಹಾಗೂ ಕಟ್ಟು, ಹಾಲು, ರಾಗಿ, ತೆಂಗು ಮುಂತಾದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿಪಡಿಸುವಂತೆ ರೈತ ಸಂಘಟನೆಗಳು ಕಳೆದ ಹಲವಾರು ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದರೂ ಕೂಡ ರಾಜ್ಯ ಸರ್ಕಾರ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ರೈತರನ್ನು ವಂಚಿಸುತ್ತಿದೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಈ ರೈತ ವಿರೋಧಿ ನೀತಿಯ ವಿರುದ್ಧ ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರವನ್ನು ಎಚ್ಚರಿಸಲು ಪ್ರತಿಭಟನೆ ನಡೆಸಲಾಗುವುದು ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಬೋರಾಪುರ ಶಂಕರೇಗೌಡ, ಎಸ್.ಮಂಜೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.