ಮಂಡ್ಯ ತಾಲೂಕಿನ ಕೊತ್ತತ್ತಿ ಹೊಬಳಿಯ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಐತಿಹಾಸಿಕ ಸಿಡಿ ಹಬ್ಬದ ಉತ್ಸವವವು ವಿಜೃಂಭಣೆಯಿಂದ ನಡೆಯಿತು.
ಗ್ರಾಮದಲ್ಲಿರುವ ಶಕ್ತಿದೇವತೆ ಶ್ರೀಕಾಳಲಿಂಗೇಶ್ವರ ದೇವಾಲಯದ ಆವರಣದಲ್ಲಿ ಸಾಮೂಹಿಕವಾಗಿ ತಂಬಿಟಿನ ಆರತಿ, ಹೂ-ಹೊಂಬಾಳೆಯೊಂದಿಗೆ ಒಟ್ಟಿಗೆ ಸೇರಿದ ಗ್ರಾಮಸ್ಥರು ಪೂಜೆ ಸಲ್ಲಿಸಿ ತಮಟೆ ನಗಾರಿ ವಾದ್ಯ ನಾದಗಳೊಂದಿಗೆ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.
ಶ್ರೀಬಸವೇಶ್ವರ, ಬೋರೇಶ್ವರ, ಮಾರಮ್ಮ ದೇವತೆಗಳ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಹರಕೆ ಸಲ್ಲಿಸುವ ಆವರಣಕ್ಕೆ ತೆರಳಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಇಷ್ಠಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸಿದರು. ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಸಾಗಿತು.
ಗ್ರಾಮದ ದೇವಾಲಯ, ಬೀದಿಗಳಿಗೆ ಮತ್ತು ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಲಾಂಕಾರ ಮಾಡಲಾಗಿತ್ತು, ಹಬ್ಬದ ಪ್ರಯುಕ್ತ ನೃತ್ಯ ಪ್ರದರ್ಶನವು ಜರುಗಿತು, ಉತ್ತಮ ನೃತ್ಯ ಪ್ರದರ್ಶನ ನೀಡಿದವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರಾದ ಕಾಳಪ್ಪ, ಕರಿಪುಟ್ಟಯ್ಯ, ಕೆ.ಎಸ್.ಸಿದ್ದರಾಜು, ಪುಟ್ಟರಾಮು, ಗ್ರಾ.ಪಂ.ಮಾಜಿ ಸದಸ್ಯರಾದ ಮಹದೇವ, ಸವಿತಾ, ಅರ್ಚಕ ಮಹದೇವಸ್ವಾಮಿ, ಸಣ್ಣಯ್ಯ, ಅವಿನಾಶ್, ಮಹಾದೇವ ಮತ್ತಿತರರಿದ್ದರು.