ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಚನ್ನಪಟ್ಟಣ-ರಾಮನಗರ ಬೈಪಾಸ್ ನಲ್ಲಿ ‘ಐಲ್ಯಾಂಡ್ ರೆಸ್ಟ್ ಏರಿಯಾ’ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ನೀಡಿರುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ವಿಧಾನಪರಿಷತ್ತಿನ ಶಾಸಕ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ರಿಫ್ರೆಷ್ಮೆಂಟ್ಟ್, ಟ್ರಕ್ ಲೇ ಬೈ, ಫ್ಯೂಯಲ್ ಸ್ಟೇಷನ್, ಹೆಲಿಪ್ಯಾಡ್, ಪ್ಯಾಟ್ರೋಲಿಂಗ್ ಸ್ಟ್ಯಾಫ್ ಆಫೀಸ್, ಆಂಬುಲೆನ್ಸ್ ಸ್ಟೇಷನ್ ಏರಿಯಾ, ಪೊಲೀಸ್ ಸ್ಟೇಷನ್, ಪರಿವೀಕ್ಷಣಾ ಮಂದಿರ, ಟ್ರಕ್ ಚಾಲಕರಿಗೆ ಶೌಚಾಲಯ ಮತ್ತು ಸ್ನಾನ ಗೃಹ ಒಳಗೊಂಡಂತೆ ಡಾರ್ಮೇಟರಿ ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಟೋಲ್ ಸಂಗ್ರಹ
ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಟೋಲ್ ಸಂಗ್ರಹ ಕುರಿತಂತೆ, ಆನ್ಯುವಲ್ ಪೊಟೆನ್ಷಿಯಲ್ ಕಲೆಕ್ಷನ್ (ಎಪಿಸಿ) ಲೆಕ್ಕಾಚಾರ ಮಾಡುವ ಹಂತದಲ್ಲಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಂತರ ಶುಲ್ಕ ವಸೂಲಾತಿ ಕುರಿತು ನಿಗದಿತ ದರವನ್ನು ನೀಡಲಾಗುವುದು ಹಾಗೂ ಶುಲ್ಕವನ್ನು ವಾರ್ಷಿಕವಾಗಿ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಯಾವ ವಾಹನಗಳಿಗೆ ನಿರ್ಬಂಧ ಮತ್ತು ಪ್ರವೇಶ
ದ್ವಿಚಕ್ರ, ತ್ರಿಚಕ್ರ, ನಾನ್ ಮೋಟರೈಸ್ಡ್ ವಾಹನಗಳು, ಟ್ರಾಕ್ಟರ್ಗಳು ಮತ್ತು ಎತ್ತಿನಗಾಡಿಗಳನ್ನು ಸಂಚಾರಕ್ಕೆ ನಿರ್ಬಂಧಿಸುವ ಪ್ರಸ್ತಾವನೆಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಂದಿದ್ದು ಪರಿಗಣಿಸುವ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಕಾರು, ಜೀಪು, ವ್ಯಾನ್, ಲಘು ವಾಹನಗಳು, ಲಘು ವಾಣಿಜ್ಯ ವಾಹನಗಳು,ಮಿನಿ ಬಸ್, ಲಘು ಸರಕು ಸಾಗಾಣಿಕೆ ವಾಹನಗಳು, ಬಸ್, ಟ್ರಕ್ (ಎರಡು ಆಕ್ಸಲ್), ತ್ರಿ ಅಕ್ಸಲ್ ವಾಣಿಜ್ಯ ವಾಹನ, ಎಚ್.ಸಿ.ಎಂ ಅಥವಾ ಇ.ಎಂ.ಇ. ಅಥವಾ ಎಂ.ಎ.ವಿ (4 ರಿಂದ 6 ಅಕ್ಸಲ್), ಓವರ್ ಸೈಜ್ಡ್ ವಾಹನಗಳು (ಎಳು ಅಥವಾ ಹೆಚ್ಚು ಆಕ್ಸಲ್) ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಸರ್ವೀಸ್ ರಸ್ತೆ ಅಭಿವೃದ್ಧಿ
ಸರ್ವೀಸ್ ರಸ್ತೆ ಅಭಿವೃದ್ಧಿಯನ್ನು ಫೆಬ್ರವರಿ ಕೊನೆಯ ವಾರಾಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಹಾಗೇ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಬೈಪಾಸ್ಗಳ ನಿರ್ಮಿಸಲಾಗುವ ನಗರ, ಪಟ್ಟಣಗಳಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಒನ್ ಟೈಮ್ ಇಮ್ ಫ್ರೂಮೆಂಟ್ ಅಂದಾಜು ಪಟ್ಟಿ ತಯಾರಿಸುವ ಹಂತದಲ್ಲಿದ್ದು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಂತರ ಸದರಿ ನಗರ/ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿಪಡಿಸಿ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ವಿವರಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಅವಶ್ಯಕ ಸರಕುಗಳನ್ನು ಸಾಗಣೆ ಮಾಡಲು ಬಳಸಿದ ರಸ್ತೆಗಳು ಹಾಳಾಗಿದ್ದು, ಇದನ್ನು ಬೆಂಗಳೂರು-ಮೈಸೂರು ರಸ್ತೆಯನ್ನು ಅಭಿವೃದ್ಧಿಪಡಿಸಲು ನೇಮಿಸಲಾಗಿರುವ ರಿಯಾಯಿತಿದಾರರೇ ಸರಿಪಡಿಸಲಿದ್ದಾರೆ. ಈಗಾಗಲೇ, ಗುಂಡಿ ಮುಚ್ಚುವಿಕೆ, ಅಗತ್ಯವಿರುವ ಭಾಗಗಳಿಗೆ ಡಾಂಬರೀಕರಣ ಕಾರ್ಯವನ್ನು ಕೈಗೊಳ್ಳುತ್ತಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದವರು ವರದಿ ನೀಡಿದ್ದಾರೆಂದು ಸಚಿವರು ತಿಳಿಸಿದ್ದಾರೆ.