ಮದ್ದೂರು ತಾಲೂಕಿನ ಎಲ್ಲಾ ವಿದ್ಯಾಸಂಸ್ಥೆಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರದಂತೆ ಜಾಗೃತಿ ಮೂಡಿಸಲಾಯಿತು.
ಮದ್ದೂರು ತಾಲ್ಲೂಕಿನ ಕೆ. ಹೊನ್ನಲಗೆರೆ ವ್ಯಾಪ್ತಿಯಲ್ಲಿ ಶೇ.100ರಷ್ಟು ತಂಬಾಕು ಮುಕ್ತಗೊಳಿಸುವ ಉದ್ದೇಶದಿಂದ ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಹಮ್ಮಿಕೊಂಡಿರುವ ನಿರಂತರ ಕೋಟ್ಪಾ ಕಾರ್ಯಾಚರಣೆ ನಡೆಯಿತು. ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳಾದ ಡಾ. ಸಂಜಯ್ ಎಂ.ಡಿ ರವರು ಮದ್ದೂರು ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕರಾದ ಸಂತೋಷ್ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ರವೀಂದ್ರ ಬಿ. ಗೌಡ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.
ಕೆ. ಹೊನ್ನಲಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ವಿದ್ಯಾಸಂಸ್ಥೆಗಳ 100 ಮೀಟರ್ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಕೋಟ್ಪಾ ಕಾರ್ಯಾಚರಣೆ ನಡೆಸಲಾಯಿತು.
ಇಂದಿನ ಕಾರ್ಯಾಚರಣೆಯಲ್ಲಿ ಸೆಕ್ಷನ್ 4 ರ ಅಡಿಯಲ್ಲಿ 10 ಪ್ರಕರಣ ದಾಖಲಿಸಿ ರೂ 1900/- ದಂಡ, ಸೆಕ್ಷನ್ 6ಎ ಅಡಿಯಲ್ಲಿ 1 ಪ್ರಕರಣ ರೂ 200/- ದಂಡ ಮತ್ತು ಸೆಕ್ಷನ್ 6ಬಿ ಅಡಿಯಲ್ಲಿ 9 ಪ್ರಕರಣ ರೂ 1700/- ದಂಡ ಒಟ್ಟಾರೆಯಾಗಿ 20 ಪ್ರಕರಣಗಳನ್ನು ದಾಖಲಿಸಿ ರೂ 3800/- ದಂಡ ವಿಧಿಸಲಾಯಿತು.
ಹಾಗೆಯೇ ಇನ್ನು ಮುಂದೆ ಈ ರೀತಿಯಾಗಿ ನಿಯಮ ಉಲ್ಲಂಘನೆ ಮಾಡದಂತೆ ಹಾಗೂ ಅಗತ್ಯವಿರುವವರು ಸಾರ್ವಜನಿಕ ಆಸ್ಪತ್ರೆ, ಮದ್ದೂರು ತಂಬಾಕು ವ್ಯಸನಮುಕ್ತ ಕೇಂದ್ರದ ಉಚಿತ ಸೇವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ಕರಪತ್ರಗಳನ್ನು ವಿತರಿಸಿ ಅರಿವು ಮೂಡಿಸಲಾಯಿತು.
ಇಂದಿನ ಕಾರ್ಯಾಚರಣೆಯಲ್ಲಿ ಜಿಲ್ಲಾ ಸಲಹೆಗಾರರಾದ ತಿಮ್ಮರಾಜು ಎಸ್.ಎನ್, ಆರಕ್ಷಕ ಉಪನಿರೀಕ್ಷಕ ಕೇಶವಮೂರ್ತಿ ಕೆ. ಎನ್, ಸಾಮಾಜಿಕ ಕಾರ್ಯಕರ್ತರಾದ ಮೋಹನ್ ಕುಮಾರ್ , ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತಮ್ಮಯ್ಯ ಹಾಜರಿದ್ದರು.