ಸಹೋದರಿಯ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ದಬ್ಬಾಳಿಕೆಯನ್ನು ಪ್ರಶ್ನಿಸಿದ ಸಹೋದರರ ಮೇಲೆ ನಾಲ್ವರ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಸಹೋದರರು ಗಂಭಿರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೆ.ಆರ್.ಪೇಟೆ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ ಲೋಕೇಶ್, ಮಾದೇಗೌಡ, ಬೋರಮ್ಮ, ಯೋಗೇಶ್ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ಅದೇ ಗ್ರಾಮದ ಬಸವರಾಜು, ರಾಘವೇಂದ್ರ, ಆಶಾರಾಣಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ:
ಗಾಯಗೊಂಡಿರುವ ಸಹೋದರರ ಸ್ವಂತ ಸಹೋದರಿಯಾದ ಆಶಾರಾಣಿಯನ್ನು ಮಾದೇಗೌಡರ ಪುತ್ರ ಲೋಕೇಶನಿಗೆ ಸಾಕಷ್ಟು ವರೋಪಚಾರ ನೀಡಿ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಲೋಕೇಶ ಮದ್ಯಪಾನ ಮಾಡಿ ಬಂದು ಆಶಾರಾಣಿ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದ. ಮೊನ್ನೆ ಗ್ರಾಮದೇವತೆಯ ಹಬ್ಬದ ದಿನ ಆಶಾರಾಣಿಗೆ ಹಲ್ಲೆ ನಡೆಸಿ ಮನೆಯಿಂದ ಹೊರಗಡೆ ನಿಲ್ಲಿಸಿದ್ದರು. ಇದನ್ನು ಪ್ರಶ್ನಿಸಿದ ಆಶಾರಾಣಿಯ ಸಹೋದರರಾದ ಬಸವರಾಜು ಮತ್ತು ರಾಘವೇಂದ್ರ ಮೇಲೆ ಆರೋಪಿಗಳಾದ ಲೋಕೇಶ, ಮಾದೇಗೌಡ, ಯೋಗೇಶ ಅವರುಗಳು ಸೇರಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಇದರಿಂದ ಬಸವರಾಜು ಮತ್ತು ರಾಘವೇಂದ್ರ ಅವರ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇವರಿಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯ ಮೇರೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಭೀರ ಗಾಯಗಳಾಗಿರುವ ಕಾರಣ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಘಟನೆ ಕುರಿತು ಗಾಯಾಳು ಸಹೋದರರ ತಾಯಿ ಪ್ರೇಮ ಅವರು ಪಟ್ಟಣ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಿರುವ ಪೊಲೀಸರು ಈ ನಡುವೆ ನಾಲ್ವರು ಆರೋಪಿಗಳ ಪೈಕಿ ಲೋಕೇಶ್ ಎಂಬಾತನನ್ನು ಬಂಧಿಸಿ ನ್ಯಾಯಾಧೀಶರ ಆದೇಶದ ಮೇರೆಗೆ ಮಂಡ್ಯ ಜೈಲಿಗೆ ಕಳುಹಿಸಿದ್ದಾರೆ.
ಉಳಿದ. ಆರೋಪಿಗಳಾದ ಮಾದೇಗೌಡ, ಬೋರಮ್ಮ, ಯೋಗೇಶ್ ಅವರುಗಳು ತಲೆ ಮರೆಸಿಕೊಂಡಿದ್ದು, ಇವರಿಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ.
ಗ್ರಾಮಸ್ಥರಿಂದ ಠಾಣೆಗೆ ಮುತ್ತಿಗೆ:
ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಹಲವಾರು ಕುಟುಂಬಳ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕುವ ಪ್ರವೃತ್ತಿಯನ್ನು ನಡೆಸುತ್ತಾ ಬೊಮ್ಮನಾಯಕನಹಳ್ಳಿ ಗ್ರಾಮದ ಪಾಳೇಗಾರರಂತೆ ವರ್ತಿಸುತ್ತಾ ಗ್ರಾಮದಲ್ಲಿ ಅಶಾಂತಿ ಸೃಷ್ಠಿಸುತ್ತಿರುವ ಆರೋಪಿಗಳಾದ ಲೋಕೇಶ್, ಮಾದೇಗೌಡ, ಬೋರಮ್ಮ, ಯೋಗೇಶ್ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಮೂಲಕ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಬೊಮ್ಮನಾಯಕನಹಳ್ಳಿ ಗ್ರಾಮದ ಹಲವಾರು ಮಂದಿ ಪಟ್ಟಣ ಪೋಲೀಸ್ ಠಾಣೆಗೆ ಮುತ್ತಿಗೆ ಹಾಕಿ ಒತ್ತಾಯ ಮಾಡಿದರು.