ಮಂಡ್ಯ ವೈದ್ಯಕೀಯ ಕಾಲೇಜಿನಲ್ಲಿ ಹೊಸದಾಗಿ ಕೆ ಎಸ್ ಎಫ್ 9 ಎಂಬ ಸಂಸ್ಥೆಯು ( agency) ಯಾವುದೇ ಸೂಚನೆ ಅಥವಾ ನೋಟಿಸಿಲ್ಲದೆ 10 ಮಂದಿ ಭದ್ರತಾ ಸಿಬ್ಬಂದಿಗಳನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದನ್ನ ಕರ್ನಾಟಕ ರಾಜ್ಯ ಜಾತ್ಯತೀತ ಜನತಾದಳದ ಪರಿಶಿಷ್ಟ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಲ್.ತುಳಸೀಧರ್ ತೀವ್ರವಾಗಿ ಖಂಡಿಸಿದ್ದು, ಮಿಮ್ಸ್ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ತೆಗೆದು ಹಾಕಿರುವ ಸಿಬ್ಬಂದಿಗಳು ಕಳೆದ ಎಂಟತ್ತು ವರ್ಷಗಳಿಂದ ಬದ್ಧತೆ ಸಿಬ್ಬಂದಿಗಳಾಗಿ ಕೆಲಸ ಮಾಡುತ್ತಿದ್ದು, ಇವರಿಗೆ 50 ವರ್ಷಗಳ ವಯೋಮಿತಿ ಮೀರಿದೆ ಎಂದು ಹೇಳಿದ್ದಾರೆ. ಕೆಲಸ ಮಾಡುತ್ತಿರುವ ಆಡಳಿತ ಮಂಡಳಿ ಗಮನಕ್ಕೆ ತಾರದೇ ಈ ರೀತಿ ಮಾಡುವುದು ಕಾನೂನುಬಾಹಿರವಾಗಿದೆ. ಈ ಕಾಲೇಜಿನ ಆಡಳಿತ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರುಗಳನ್ನು 60 ವರ್ಷ ನಿವೃತ್ತಿ ಹೊಂದಿದ ಬಳಿಕ ಮತ್ತೆ ಅವರನ್ನು ಏಜೆನ್ಸಿ ಮುಖಾಂತರ ಕೆಲಸಕ್ಕೆ ತೆಗೆದುಕೊಂಡಿರುವುದು ಕಂಡು ಬಂದಿದೆ. ಇದನ್ನೆಲ್ಲ ತಿಳಿದ ಪ್ರತಿಭಟನೆಕಾರರು ಗಲಾಟೆ ಮಾಡಿರುವುದಕ್ಕೆ ಆ ಸಿಬ್ಬಂದಿಗಳನ್ನು ಕೂಡ ಕೈ ಬಿಡಲಾಗಿದೆ ಎಂದು ದೂರಿದ್ದಾರೆ.
ಕಳೆದ ಎಂಟು ಹತ್ತು ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಇವರುಗಳನ್ನ ಕೂಡಲೇ ವಾಪಸ್ ಕೆಲಸಕ್ಕೆ ತೆಗೆದುಕೊಂಡು ಅವರಿಗೆ ವೇತನ ನೀಡಬೇಕು. ಜಿಲ್ಲಾಧಿಕಾರಿಗಳು ಕೂಡಲೇ ಏಜೆನ್ಸಿ ಅವರ ವಿರುದ್ಧ ಕ್ರಮ ಕೈಗೊಂಡು ಕಳೆದ 12 ದಿನಗಳಿಂದ ನಿರಂತರ ರಾತ್ರಿ ಹಗಲು ಎನ್ನದೆ ಪ್ರತಿಭಟನೆ ನಡೆಸುತ್ತಿರುವ ಸಿಬ್ಬಂದಿಯ ಕುಟುಂಬಗಳಿಗೆ ನೆರವಾಗಲು ಮುಂದಾಗಬೇಕೆಂದು ಒತ್ತಾಯಿಸಿರುವ ಅವರು, ಒಂದು ವೇಳೆ ಕೂಡಲೇ ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟಗಳು ಹಾಗೂ ಸಂಘ ಸಂಸ್ಥೆಗಳ ಜೊತೆ ಒಗ್ಗೂಡಿ ತೀವ್ರತರ ಚಳುವಳಿ ಮಾಡಬೇಕಾಗುತ್ತದೆಂದು ಎಚ್ಚರಿಸಿದ್ದಾರೆ.