ಮಂಡ್ಯನಗರ ಹಾಲಹಳ್ಳಿ ನ್ಯೂ ತಮಿಳು ಕಾಲೋನಿಯ ಶ್ರಮಿಕರಿಗೆ ಕೂಡಲೇ ವಾಸಸ್ಥಳ ದೃಢೀಕರಣ ಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಜನಶಕ್ತಿ ಸಂಘಟನೆ ನೇತೃತ್ವದಲ್ಲಿ ಶ್ರಮಿಕರು ಮಂಡ್ಯ ನಗರಸಭೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರಸಭೆ ಎದುರು ಜಮಾಯಿಸಿದ ಶ್ರಮಿಕ ನಿವಾಸಿಗಳು ಕಳೆದ ಒಂದು ತಿಂಗಳ ಹಿಂದೆಯೇ ವಾಸಸ್ಥಳ ದೃಢೀಕರಣ ಪತ್ರ ನೀಡುವಂತೆ ನಗರಸಭೆ ಅರ್ಜಿ ಸಲ್ಲಿಸಿದರು. ಇದುವರೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ ಹಾಗೂ ಜಿಲ್ಲಾಧ್ಯಕ್ಷ ಸಿದ್ದರಾಜು ದೂರಿದರು.
ನ್ಯೂ ತಮಿಳ್ ಕಾಲೋನಿಯ ಸುಮಾರು 60 ಕುಟುಂಬಗಳಿಗೆ ವಾಸಸ್ಥಳ ದೃಢೀಕರಣ ಪತ್ರ ಕೋರಿ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಆಗಿವೆ, ಪ್ರತಿ ದಿನ ಹೊಸ ವಾಸಸ್ಥಳ ದೃಢೀಕರಣ ಪತ್ರ ಕೇಳಲು ನಗರಸಭೆಗೆ ಜನ ಅಲೆಯುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ಅಲ್ಲದೇ ನಿಮಗೆ ಹಕ್ಕುಪತ್ರ, ವಾಸ ದೃಢೀಕರಣ ಪತ್ರ ಸೇರಿ ಒಟ್ಟಿಗೆ ಕೊಡುತ್ತೇವೆ ಎಂದು ಸುಳ್ಳುಗಳನ್ನ ಹೇಳಿ ಜನರನ್ನ ದಿನನಿತ್ಯ ಅಲೆದಾಡಿಸುತ್ತಿದ್ದಾರೆಂದು ಕರ್ನಾಟಕ ಜನಶಕ್ತಿ ಸಿದ್ದರಾಜು ದೂರಿದರು. ದೃಢೀಕರಣ ಪತ್ರವನ್ನು ನೀಡದಿದ್ದ ಪಕ್ಷದಲ್ಲಿ ಮಂಡ್ಯದ ಎಲ್ಲಾ ಶ್ರಮಿಕ ನಿವಾಸಿಗಳನ್ನು ಹೋರಾಟಕ್ಕೆ ಕರೆತರಬೇಕಾಗುತ್ತದೆ, ನಗರಸಭೆಗೆ ಮುಖಭಂಗವಾಗುವ ಮೊದಲು, ಈ ಸಮಸ್ಯೆ ಬಗೆಹರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಮುನ್ನಡೆಯ ಕಾರ್ಯದರ್ಶಿ ಶಿಲ್ಪ, ವಿದ್ಯಾರ್ಥಿ ಸಂಘಟನೆಯ ಅಂಜಲಿ, ಮಹಿಳಾ ಮುನ್ನಡೆಯ ಜ್ಯೋತಿ, ಶ್ರಮಿಕ ನಗರ ನಿವಾಸಿಗಳ ಮುಖಂಡರು ಭಾಗವಹಿಸಿದ್ದರು.