ವರದಿ : ಪ್ರಭು ವಿ.ಎಸ್.
ದಶಪಥ ಹೆದ್ದಾರಿ ಉದ್ಘಾಟನೆಯಾಗಿ ಎರಡು ವಾರಗಳು ಕಳೆಯುವ ಮುನ್ನವೇ ನಿರಂತರ ಅಪಘಾತಗಳ ಅಪಖ್ಯಾತಿಗೆ ಗುರಿಯಾಗಿದೆ.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಸಮೀಪ ಶನಿವಾರ ಸಂಜೆ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತದ ವೇಳೆ ಯುವತಿ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಧಾರುಣ ಗಾಯಗೊಂಡಿರುವ ಘಟನೆ ಜರುಗಿದೆ.
ಶುಕ್ರವಾರ ಗೆಜ್ಜಲಗೆರೆ ಸಮೀಪದಲ್ಲೇ ಸಂಭವಿಸಿದ ಗೂಡ್ಸ್ ವಾಹನ, ಕಾರು ನಡುವಿನ ಡಿಕ್ಕಿ ವೇಳೆ ಮಡಿಕೇರಿ ಮೂಲದ ತಾಯಿ ಮತ್ತು ಮಗ ಧಾರುಣವಾಗಿ ಸಾವನಪ್ಪಿದ್ದ ಘಟನೆ ಮಾಸುವ ಮುನ್ನವೇ, ಮತ್ತೊಂದು ಅಪಘಾತ ಸಂಭವಿಸಿರುವುದು ಇಲ್ಲಿನ ದುರಂತಕ್ಕೆ ಸಾಕ್ಷಿಯಾಗಿದೆ.
ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆಯಾತಪ್ಪಿ ಬಿದ್ದು ಹಿಂಬದಿ ಕುಳಿತಿದ್ದ ಯುವತಿ ತಮಿಳುನಾಡು ಮೂಲದ ಪ್ರಿಯಾಂಕರಾಜ್ (24) ಸ್ಥಳದಲ್ಲೇ ಮೃತಪಟ್ಟಿದ್ದು, ಆಂಧ್ರ ಪ್ರದೇಶದ ಲಕ್ಷ್ಮೀ ನಾರಾಯಣಗೌಡ (25) ತೀವ್ರವಾಗಿ ಗಾಯಗೊಂಡು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಲಕ್ಷ್ಮೀ ನಾರಾಯಣಗೌಡ ಹಾಗೂ ಪ್ರಿಯಾಂಕರಾಜ್ ಇಬ್ಬರು ಸ್ನೇಹಿತರಾಗಿದ್ದು ಬೆಂಗಳೂರಿನ ಟಿ.ಸಿ.ಎಸ್ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದರು. ರಜೆ ನಿಮಿತ್ತ ಮೈಸೂರಿಗೆ ತೆರಳಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ದಶಪಥ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೃತ ಯುವತಿಯ ಶವವನ್ನು ಮದ್ದೂರು ತಾಲೂಕು ಆಸ್ಪತ್ರೆಯ ಶವಗಾರದಲ್ಲಿರಿಸಿದ್ದು, ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ