ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ, ಈ ಹೊತ್ತಿನಲ್ಲಿ ರಾಜ್ಯ ಬಿಜೆಪಿ ಸರಕಾರವು ತನ್ನ ಕಟ್ಟಕಡೆಯ ಸಂಪುಟ ಸಭೆಯಲ್ಲಿ ಮೀಸಲಾತಿಯ ಸ್ವರೂಪವನ್ನು ಎಲ್ಲಾ ವರ್ಗಗಳ ಬೇಡಿಕೆ ಮತ್ತು ಸಾಮಾಜಿಕ ನ್ಯಾಯದ ಅನುಗುಣವಾಗಿ ಬದಲಿಸಿದೆ ಎಂದು ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಮಾಡಬೇಕೆನ್ನುವುದು ಲಿಂಗಾಯತರು, ಒಕ್ಕಲಿಗರ ಬಹುಕಾಲದ ಬೇಡಿಕೆಯಾಗಿತ್ತು. ಹಾಗಾಗಿ ಈ ಸಮುದಾಯಗಳಿಗೆ ತಲಾ 2 ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ. ಇನ್ನೊಂದೆಡೆಯಲ್ಲಿ ದಲಿತರಿಗೆ ಒಳಮೀಸಲಾತಿ ತರುವ ಆಲೋಚನೆಯೂ ಅತ್ಯಂತ ಕಠಿಣ ನಿರ್ಣಯ ಕೈಗೊಳ್ಳಲಾಗಿದ್ದು, ಸಮಾಜದ ಸರ್ವತೋಮುಖ ಬೆಳವಣಿಗೆಯೇ ಮೊದಲ ಅದ್ಯತೆಯಾಗಿ ಈ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ : ಬೊಮ್ಮಾಯಿ ಸರ್ಕಾರದ ಕೋಮುವಾದಿ ಮತ್ತು ನಯವಂಚಕ ಮೀಸಲಾತಿ ಸೂತ್ರ
ಬಿಜೆಪಿ ಮುಖಂಡ ಅಶೋಕ್ ಜಯರಾಂ ಮಾತನಾಡಿ, ಈ ಹಿಂದೆ ರಾಜ್ಯ ಸರಕಾರವು ಇತ್ತೀಚೆಗಷ್ಟೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇಕಡ 15ರಿಂದ 17ಕ್ಕೂ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇಕಡ 3ರಿಂದ 7ಕ್ಕೂ ಹೆಚ್ಚಿಸಿತ್ತು, ಈ ಮೂಲಕ ಆಯಾ ಸಮುದಾಯದ ಏಳಿಗೆಗೆ ನಿಜವಾದ ಅರ್ಥದಲ್ಲಿ ಶ್ರಮಿಸಿತು ಎಂದರು.
ಬಿಜೆಪಿ ಸರಕಾರದ ಈ ತೀರ್ಮಾನವು ಇನ್ನೇನು ಚುನಾವಣೆ ಹೊತ್ತಿನಲ್ಲಿ ತೆಗೆದುಕೊಂಡ ತೀರ್ಮಾನ ಇದು ರಾಜಕೀಯ ಪ್ರೇರಿತ ಎಂದು ವಿಪಕ್ಷಗಳು ಹೇಳುವುದು ಸಹಜ. ಆದರೆ ವಿರೋಧ ಪಕ್ಷಗಳ ಅಧಿಕಾರದ ಅವಧಿಯಲ್ಲಿ ಮೀಸಲಾತಿ ವಿಷಯಗಳು ಮತ್ತು ವಿಶೇಷವಾಗಿ ಒಳ ಮೀಸಲಾತಿ ವಿಷಯಗಳು ಬರೀ ಬಾಯಿಮಾತಾಗಿ ಚುನಾವಣೆಗೆ ಅಸ್ತ್ರವಾಗುತ್ತಿದ್ದವು. ಈ ಬಾರಿ ಹಾಗಾಗಬಾರದು ಎನ್ನುವ ನಿರ್ಣಯದೊಂದಿಗೆ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಾ.ಸಿದ್ದರಾಮಯ್ಯ, ಅಶೋಕ್ ಜಯರಾಂ, ನಾಗಾನಂದ್, ಸಿ.ಟಿ.ಮಂಜುನಾಥ್ ಉಪಸ್ಥಿತರಿದ್ದರು.