ಅಯ್ಯಾ ಸುದೀಪ, ನೀನಿವತ್ತು ತುಂಬಾ ಸಣ್ಣವನೆನಿಸಿದೆ. ಬಿಜೆಪಿಯನ್ನು ಬೆಂಬಲಿಸಿದ್ದಕ್ಕಲ್ಲ; ಬೆಂಬಲಿಸಲು ನೀನು ಕೊಟ್ಟ ಆ ರಾಜಕೀಯ ಅಪ್ರಬುದ್ಧ ಸಮಜಾಯಿಷಿಯಿಂದ!
ಅಲ್ಲಾ, ಅವರು ನನ್ನ ಕಷ್ಟ ಕಾಲದಲ್ಲಿ ವೈಯಕ್ತಿಕವಾಗಿ ನೆರವು ನೀಡಿದರು ಅದಕ್ಕೇ ಬೆಂಬಲಿಸುತ್ತಿದ್ದೇನೆ ಅಂತಿದೀಯಲ್ಲಾ, ನಿನ್ನ ಬೆನ್ನನ್ನೊಮ್ಮೆ ನೋಡಿಕೊ, ನಿನ್ನ ಕಷ್ಟಕ್ಕೆ ನಿಜವಾಗಲೂ ನೆರವಾದವರು ಯಾರು? ನಿನ್ನ ಪ್ರತಿ ಸಿನಿಮಾ ಬಿಡುಗಡೆಯಾದಾಗ, ಕಟ್ ಔಟ್ ಕಟ್ಟಿ, ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ತಗೊಂಡು ನಿನ್ನನ್ನು ಸ್ಟಾರ್ ಆಗಿ ಬೆಳೆಸಿದ್ದು ಜನ! ಬಿಜೆಪಿಯಲ್ಲ. ಇವತ್ತು ಆ ಜನರ ಬದುಕಿನ ಮೇಲೆ ಬಿಜೆಪಿ ನಿರ್ದಾಕ್ಷಿಣ್ಯವಾಗಿ ಸವಾರಿ ಮಾಡುತ್ತಿದೆ. ಬೆಲೆಯೇರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ; 40% ಕಮೀಷನ್ ಬಿಜೆಪಿ ಸರ್ಕಾರದಿಂದ ಈ ಜನ ರೋಸಿ ಹೋಗಿದ್ದಾರೆ. ಹಾಗೆ ನೋಡಿದರೆ ನೀನು, ನಿನಗೆ ಸ್ಟಾರ್ ಗಿರಿ ಕೊಟ್ಟ ಜನರ ಪರವಾಗಿ ನಿಲ್ಲಬೇಕಿತ್ತು. ಅದನ್ನು ಬಿಟ್ಟು ಬೆಳೆಸಿದ ಜನರ ವಿರುದ್ದವೇ ನಿಂತಿದ್ದೀಯಲ್ಲ? ಸಣ್ಣವನಾಗದೆ ಉಳಿಯಲು ನಿನ್ನಲ್ಲಿ ಕಾರಣಗಳುಂಟಾ?
ಇದನ್ನೂ ಓದಿ : ಪಿಚ್ಚರ್ ಅಭಿ ಬಾಕೀ ಹೈ : ಬಿಜೆಪಿ ಪಾಲಿಗೆ ಇವರಾಗಲಿದ್ದಾರಾ ಆಪದ್ಭಾಂಧವರು!?
ಒಬ್ಬ ನಟನನ್ನು, ಈ ರಾಜ್ಯದ ಮುಖ್ಯಮಂತ್ರಿಯೇ ಪಕ್ಕದಲ್ಲಿ ಕೂರಿಸಿಕೊಂಡು ಪ್ರೆಸ್ ಮೀಟ್ ಮಾಡುತ್ತಾರೆಂದರೆ, ಮೂರು ವರ್ಷ ಆಡಳಿತ ನಡೆಸಿದ ಆ ಪಕ್ಷ ಅದೆಷ್ಟು ದೈನೇಸಿ ಸ್ಥಿತಿ ತಲುಪಿದೆ ಅನ್ನೋದು ನಿನಗೆ ಅರ್ಥವಾಗದೆ ಹೋಯಿತಲ್ಲ ಸುದೀಪು!
ನಿನ್ನ ಬಗ್ಗೆ ಮರುಕವಿದೆ….
✍️ ಮಾಚಯ್ಯ ಹಿಪ್ಪರಗಿ