ಮಂಡ್ಯದಲ್ಲಿಂದು ಜನಸಾಗರವೇ ತುಂಬಿ ತುಳುಕುತ್ತಿತ್ತು. ಜೆಡಿಎಸ್ ಅಭ್ಯರ್ಥಿಯಾಗಿ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಸಹಸ್ರಾರು ಜನರ ಹರ್ಷೋದ್ಘಾರದ ನಡುವೆ ನಾಮಪತ್ರ ಸಲ್ಲಿಸಿದರು.
ಸಾವಿರಾರು ಜೆಡಿಎಸ್ ಕಾರ್ಯಕರ್ತರು ಬಾವುಟ ಹಿಡಿದು ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಆರ್. ರಾಮಚಂದ್ರು ಪರ ಜಯಘೋಷ ಮೊಳಗಿಸಿದರು. ಅಪಾರ ಜನ ಸಾಗರದ ಮಧ್ಯೆ ಮೆರವಣಿಗೆಯಲ್ಲಿ ಬಂದ ರಾಮಚಂದ್ರು ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಮಚಂದ್ರು ಅವರ ಜೊತೆ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್ಮುಲ್ ಉಪಾಧ್ಯಕ್ಷ ರಘುನಂದನ್, ಮುಖಂಡರಾದ ಸಾತನೂರು ಜಯರಾಂ ಉಪಸ್ಥಿತರಿದ್ದರು.
ವಿಶೇಷ ಪೂಜೆ
ನಾಮಪತ್ರ ಸಲ್ಲಿಕೆಗೂ ಮುನ್ನ ಬೆಳಿಗ್ಗೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ತೆರಳಿದ ಬಿ.ಆರ್.ರಾಮಚಂದ್ರು ಕಾಲಭೈರವೇಶ್ವರವಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮನೆದೇವರು ಜಿ.ಹೊಸಹಳ್ಳಿಯ ಶಂಭುಲಿಂಗೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ತರುವಾಯ ಮಂಡ್ಯದ ಅರಕೇಶ್ವರ ಹಾಗೂ ಕಾಳಿಕಾಂಭ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಬೃಹತ್ ಮೆರವಣಿಗೆ
ನಾಮಪತ್ರ ಸಲ್ಲಿಕೆಗೂ ಮುನ್ನ ಮಂಡ್ಯನಗರದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೂಲಕ ತಾಲ್ಲೂಕು ಕಚೇರಿಗೆ ಸಹಸ್ರಾರು ಜೆಡಿಎಸ್ ಕಾರ್ಯಕರ್ತರ ಜಯಘೋಷ, ತಮಟೆ, ನಗಾರಿ ಹಾಗೂ ವಿವಿಧ ಕಲಾತಂಡಗಳ ಮೆರವಣಿಗೆಯೊಂದಿಗೆ ಸಾಗಿ ಬಂದ ರಾಮಚಂದ್ರು ಅವರು ಜನರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಸಾಗಿದರು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಮೆರವಣಿಗೆಯಲ್ಲಿದ್ದ ಸಹಸ್ರಾರು ಕಾರ್ಯಕರ್ತರು ದೇವೇಗೌಡ, ಕುಮಾರಸ್ವಾಮಿ ಹಾಗೂ ರಾಮಚಂದ್ರು ಅವರಿಗೆ ಜೈಕಾರ ಹಾಕಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನ್ನದಾನಿ, ರಾಮಚಂದ್ರು ಅವರ ಪತ್ನಿ ಕಲ್ಪನಾ, ಸಹೋದರ ಬಿ.ಆರ್.ಸುರೇಶ್, ಬೂದನೂರು ಸ್ವಾಮಿ, ಹನಕೆರೆ ಕಿರಣ್ ಮತ್ತಿತರ ಮುಖಂಡರಿದ್ದರು.