ಶ್ರೀರಂಗಪಟ್ಟಣದ ತಾಲ್ಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ಸರ್ವೇ ನಂ 986ರ ಜಮೀನು ಖರೀದಿ ಮಾಡಿರುವ ಚೇತನ್ ಹಾಗೂ ಮುರುಳಿ ಎಂಬುವವರು ತಾವು ಖರೀದಿ ಮಾಡಿದ ಜಮೀನಿನ ಜೊತೆಗೆ ಸಮೀಪದಲ್ಲೇ ಇರುವ ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿವೇಶನವನ್ನಾಗಿ ಮಾರ್ಪಡಿಸಿದ್ದಾರೆ ಎಂದು ರೈತಸಂಘದ ಮುಖಂಡ ರಘು ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 10 ಎಕರೆಯಷ್ಟು ಉದ್ದವುಳ್ಳ ರಾಜ ಕಾಲುವೆ (ಪೂರ್ಣಪ್ರಸನ್ನ ನಾಲೆ)ಯನ್ನು ಮಣ್ಣಿನಿಂದ ಮುಚ್ಚಿ, ತಂತಿ ಬೇಲಿ ಹಾಕುವ ಮೂಲಕ ಸೈಟ್ (ನಿವೇಶನ) ಮಾಡುತ್ತಿದ್ದಾರೆ. ಈ ಬಗ್ಗೆ ಕೆ.ಆರ್.ಎಸ್ ಪೊಲೀಸ್ ಠಾಣೆಗೆ, ಬೆಳಗೊಳ ಗ್ರಾಮ ಪಂಚಾಯಿತಿ ಪಿಡಿಓಗೆ, ಉಪತಹಸಿಲ್ದಾರ (ನಾಡ ಕಚೇರಿ), ತಹಶಿಲ್ದಾರ್ ಸೇರಿದಂತೆ ಮಂಡ್ಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.
ದೂರು ನೀಡಿ ತಿಂಗಳು ಕಳೆದರೂ ಕೂಡ ಅಧಿಕಾರಿಗಳು ಸ್ಥಳ ಪರೀಶಿಲನೆ ಮಾಡಿ ಕೆಲಸ ಮಾಡುತ್ತಿರುವುದನ್ನು ನಿಲ್ಲಿಸಿಲ್ಲ, ನಾನು ಹಲವಾರು ಬಾರಿ ತಹಶಿಲ್ದಾರ್ ಕಚೇರಿಗೆ ಹೋದರು ಕೂಡ ಪ್ರಯೋಜನವಾಗಲಿಲ್ಲ. ಯಾವ ಇಲಾಖೆಗೆ ಹೋದರೂ ಕೂಡ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಹಿಂಬರಹ ಕೂಡ ಕೊಟ್ಟಿದ್ದಾರೆ. ಹಾಗಾದರೆ ನಾವು ಯಾರ ಬಳಿ ಹೋಗಬೇಕೆಂದು ಪ್ರಶ್ನಿಸಿದರು. ಆದ್ದರಿಂದ ಮೇಲಾಧಿಕಾರಿಗಳು ರಾಜಕಾಲುವೆ ಒತ್ತುವರಿ ಮಾಡಿರುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣೇಗೌಡ, ಆನಂದ್ ಉಪಸ್ಥಿತರಿದ್ದರು.