ಸಂವಿಧಾನ ಮತ್ತು ಗಣರಾಜ್ಯೋತ್ಸವ ದಿನಕ್ಕೆ ಅಪಮಾನ ಮಾಡಿದ ಆರೋಪದ ಮೇಲೆ ನಿನ್ನೆಯಷ್ಟೆ ಚಿತ್ರನಟಿ ರಚಿತಾ ರಾಮ್ ಅವರ ಮೇಲೆ ಮದ್ದೂರಿನಲ್ಲಿ ದೂರು ದಾಖಲಾಗಿತ್ತು, ಇಂದು ಭಾನುವಾರ ಇದೇ ನಟಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಭಾರತ ಡಾ. ಬಿ ಆರ್ ಅಂಬೇಡ್ಕರ್ ಸೈನ್ಯ ಮಳವಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಅಂಬೇಡ್ಕರ್ ಸೈನ್ಯ ತಾಲ್ಲೂಕು ಅಧ್ಯಕ್ಷ ಯತ್ತಂಬಾಡಿ ಪುಟ್ಟಸ್ವಾಮಿ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ದೇಶದ್ರೋಹ ಪ್ರಕರಣವನ್ನು ದಾಖಲು ಮಾಡುವಂತೆ ದೂರು ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಬಂಡೂರು ಸಿದ್ದರಾಜು ಮಾತನಾಡಿ, ಸಂವಿಧಾನಕ್ಕೆ ಮತ್ತು ಗಣರಾಜ್ಯೋತ್ಸವ ದಿನಕ್ಕೆ ನಟಿ ರಚಿತಾ ರಾಮ್ ಅಪಮಾನ ಮಾಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಯತ್ತಂಬಾಡಿ ಪುಟ್ಟಸ್ವಾಮಿ, ಉಪಾಧ್ಯಕ್ಷ ಚುಂಚಣ್ಣ ಸೇರಿದಂತೆ ಹಲವರು ಇದ್ದರು