ಈ ಬಾರಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಪರ ಆಡಳಿತಕ್ಕಾಗಿ ಮಂಡ್ಯ ಜಿಲ್ಲೆಯ ಏಳೂ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಮತದಾರರು ಬೆಂಬಲಿಸಬೇಕೆಂದು ಜೆಡಿಎಸ್ ರಾಜ್ಯ ರೈತ ಘಟಕದ ಅಧ್ಯಕ್ಷೆ ಚೈತ್ರಗೌಡ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಪಂಚರತ್ನ ರಥಯಾತ್ರೆ ಮೂಲಕ ಪ್ರತಿ ಮನೆಗೂ ಯೋಜನೆ ಮಹತ್ವವನ್ನು ತಿಳಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಅಭೂತಪೂರ್ವ ಬೆಂಬಲ ಕಂಡು ಬಂದಿದೆ, ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ರಾಜ್ಯದ ಜನರ ಕೂಗಾಗಿದೆ ಎಂದು ಹೇಳಿದರು.
ರೈತರ ಸಾಲಮನ್ನಾ, ಸ್ತ್ರೀಶಕ್ತಿ ಸಂಘದ ಸಾಲ ಮನ್ನಾ ಮಾಡುವ ಮಹದಾಸೆಯನ್ನು ನಮ್ಮ ಜೆಡಿಎಸ್ ಪಕ್ಷ ಹೊಂದಿದೆ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪಂಚರತ್ನ ಯೋಜನೆಗಳ ಪರಿಹಾರ ಎಂಬುದು ಜೆಡಿಎಸ್ ಐದು ಅಂಶಗಳ ಕಾರ್ಯಸೂಚಿಯಾಗಿದೆ, ಶಿಕ್ಷಣವೇ ಅಧುನಿಕ ಶಕ್ತಿ, ಆರೋಗ್ಯವೇ ಸಂಪತ್ತು, ಮಹಿಳಾ ಸಬಲೀಕರಣ, ವಸತಿಯ ಅಸರೆ ಎಂಬ ಹೆಸರಿನಲ್ಲಿ ಯೋಜನೆಯ ಬಗ್ಗೆ ರಾಜ್ಯದ ಮೂಲೆ ಮೂಲೆಯಲ್ಲಿ ತಿಳಿಸಲಾಗಿದೆ. ಈ ಬಾರಿ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಆಮಿಷಕ್ಕೆ ಮುಗ್ಧ ಜನರು ಬಲಿಯಾಗಬಾರದು, ಇಲ್ಲಿತನಕ ನಡೆಸಿರುವ ಆ ಪಕ್ಷಗಳು ಜನ ವಿರೋಧಿಯಾಗಿದೆ. ಜನಪರವಾದ ಸರ್ಕಾರ ಬೇಕು ಎಂಬುದು ಎಲ್ಲೆಡೆ ಕೇಳಿ ಬರುತ್ತಿದೆ. ಮಹಿಳಾ ಸಬಲೀಕರಣ ಹಾಗೂ ರಕ್ಷಣೆಗೆ ಜೆಡಿಎಸ್ ಬೆಂಬಲಿಸಿ ಎಂದು ಕೋರಿದರು.
ಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಪದ್ಮಾವತಿ, ಜೆಡಿಎಸ್ ಜಿಲ್ಲಾಧ್ಯಕ್ಷೆ ಮಂಜುಳಾ ಉದಯಶಂಕರ್, ನಗರಸಭೆ ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ, ಮುಖಂಡರಾದ ಆಯಿಷಾ ತಬಸ್ಸುಂ ಹಾಗೂ ವತ್ಸಲಾ ಉಪಸ್ಥಿತರಿದ್ದರು.