ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ಬಿಜೆಪಿಯವರು ನೀಡಿದ್ದ ಸೀರೆ ಹಾಗೂ ಕೋಳಿಗಳನ್ನು ಮತದಾರರು ವಾಪಸ್ ಎಸೆದು ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಸಂದೇಶ ನೀಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಕೆ.ಆರ್ ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ ನಾರಾಯಣಗೌಡ ಅವರಿಗೆ ಮತ ನೀಡುವಂತೆ ಬಿಜೆಪಿ ಮುಖಂಡರು ಗ್ರಾಮದ ಎಲ್ಲ ಮನೆಗಳಿಗೆ ಸೀರೆ ಮತ್ತು ಕೋಳಿಯನ್ನು ಹಂಚಿದ್ದರು. ಗ್ರಾಮದ ಮಹಿಳೆಯರು ಮತದಾನಕ್ಕೂ ಮುನ್ನ ಬಿಜೆಪಿಗರು ನೀಡಿದ್ದ ಸೀರೆಯನ್ನು ವಾಪಸ್ ಎಸೆದು, ಕೋಳಿಯನ್ನು ಹಿಂದಿರುಗಿಸಿದ್ದಾರೆ. “ದಲಿತ ವಿರೋಧಿಯಾಗಿರುವ ಬಿಜೆಪಿಗೆ ಧಿಕ್ಕಾರ. ಬಿಜೆಪಿಗೆ ನಾವು ಮತ ಹಾಕುವುದಿಲ್ಲ” ಎಂದು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಚಿವ ಕೆ.ಸಿ. ನಾರಾಯಣಗೌಡ ಬೆಂಬಲಿಗರು ನಿನ್ನೆ ರಾತ್ರಿ ಸೀರೆ ಮತ್ತು ಕೋಳಿಗಳನ್ನು ಹಂಚಿ ಬಿಜೆಪಿಗೆ ಮತ ನೀಡುವಂತೆ ಕೋರಿದ್ದರು. ಆದರೆ ಮತದಾರರು ಕೋಳಿ ಮತ್ತು ಸೀರೆ ಬೇಡ ಎಂದರೂ ಮನೆಯ ಕಿಟಕಿ ಮತ್ತು ಬಾಗಿಲಿಗೆ ಅವುಗಳನ್ನು ಸಿಗಿಸಿ ಬಿಜೆಪಿಗೆ ಮತ ನೀಡುವಂತೆ ಒತ್ತಾಯ ಮಾಡಿ, ಆಮಿಷ ತೋರಿಸಿದ್ದರು. ಆದರೆ ಗಂಜಿಗೆರೆ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಕುರುಬ ಸಮಾಜದವರು ನಾವು ಮತಗಳನ್ನು ಮಾರಿಕೊಳ್ಳುವುದಿಲ್ಲ ಸ್ವಾಭಿಮಾನಕ್ಕೊಸ್ಕರ ಪ್ರಜಾಪ್ರಭುತ್ವದ ಉಳಿವಿಗಾಗಿ ಮತ ನೀಡುತ್ತೆವೆಂದು ಹೇಳಿ ಕೋಳಿಯನ್ನು ಹಂಚಿದ ವ್ಯಕ್ತಿಗಳ ಮನೆ ಮುಂದೆ ಹೋಗಿ ಬಿಸಾಕಿದರು. ಈ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.