- ಮೀನು ಸಾಕಾಣಿಕೆ ಮಾಡಲು 5 ವರ್ಷಗಳ ಅವಧಿಗೆ ಗುತ್ತಿಗೆ ಪಡೆಯಲಾಗಿದೆ
- ಮನ್ಮುಲ್ ನ ರಾಸಾಯನಿಕ ಮಿಶ್ರಿತ ವಿಷದ ನೀರು
- ತಾಂತ್ರಿಕ ಪರೀಕ್ಷೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ
- ಸಾದೊಳಲು ಗ್ರಾಮದ ಪಿಡಿಒ ಗಮನಕ್ಕೆ ತಂದಿದ್ದರು ನಿರ್ಲಕ್ಷ್ಯ
ಮನ್ಮುಲ್ ನ ರಾಸಾಯನಿಕ ಮಿಶ್ರಿತ ವಿಷದ ನೀರು ಕೆರೆಗೆ ಹರಿದ ಪರಿಣಾಮ ಲಕ್ಷಾಂತರ ರೂ. ಬೆಲೆ ಬಾಳುವ ಲಕ್ಷಾಂತರ ವಿವಿಧ ಜಾತಿಯ ಮೀನುಗಳು ಮದ್ದೂರು ತಾಲೂಕಿನ ಕುದರಗುಂಡಿ ಕೆರೆಯಲ್ಲಿ ಮೃತಪಟ್ಟಿವೆ.
ಸಾವನ್ನಪ್ಪಿರುವ ಮೀನು ಮರಿಗಳು ದಡ ಸೇರಿದ್ದು, ಅವುಗಳನ್ನು ಕೆರೆ ಏರಿಯ ಮೇಲೆ ತಂದು ಸುರಿಯಲಾಗಿದೆ.
ಗ್ರಾಮದ ಕೆ.ಎಂ.ಚನ್ನಪ್ಪ ಎಂಬುವರು ಕೆರೆಯಲ್ಲಿ ಮೀನು ಸಾಗಾಣಿಕೆ ಮಾಡಲು ಟೆಂಡರ್ ತೆಗೆದಿಕೊಂಡಿದ್ದರು. ಕೆರೆಯಲ್ಲಿ ಕಾಟ್ಲ, ರೋಹು, ಗೌರಿ ಮೀನು ಸೇರಿದಂತೆ ಅಂದಾಜು 3 ಲಕ್ಷ ಮೀನಿನ ಮರಿಗಳನ್ನು ಸಾಗಾಣಿಕೆ ಮಾಡಿದ್ದರು. ಮೀನು ಮರಿಗಳು ಒಂದು ವರ್ಷದ ಅಂದಾಜು ಒಂದುವರೆ ಕೆಜಿ ದಪ್ಪದ ಮೀನುಗಳು ಸತ್ತಿದ್ದು, ಅಂದಾಜು 8 ಲಕ್ಷ ರೂ.ನಷ್ಟವಾಗಿದೆ ಎಂದು ಗುತ್ತಿಗೆದಾರ ಚನ್ನಪ್ಪ ತಿಳಿಸಿದ್ದಾರೆ.
ತಾಲೂಕಿನ ಗೆಜ್ಜಲಗೆರೆಯ ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ (ಮನ್ಮುಲ್)ಬರುವ ಹಾಲಿನ ಟ್ಯಾಂಕರ್ ಗಳನ್ನು ಆಸಿಡ್ ಮಿಶ್ರಿತ ರಾಸಾಯನಿಕ ದ್ರಾವಣದಿಂದ ತೊಳೆದು, ಆ ನೀರನ್ನು ಕಾಲುವೆಯ ಮೂಲಕ ಕೆರೆಗೆ ಬಿಡುತ್ತಿರುವುದರಿಂದ ಈ ಘಟನೆ ಸಂಭವಿಸಿದೆ ಎಂದು ಗುತ್ತಿಗೆ ಪಡೆದಿರುವ ಚನ್ನಪ್ಪ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
72 ಎಕರೆ ಪ್ರದೇಶವಿರುವ ಕೆರೆಯಲ್ಲಿ ಮೀನುಗಳು ಇದ್ದವು. ಘಟನೆಯಿಂದ ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಗಬ್ಬು ವಾಸನೆ ಬರುತ್ತಿದೆ. ದೂರು ನೀಡಿದ ಮೂರು ದಿನಗಳ ನಂತರ ಮನ್ಮುಲ್ ಅಧಿಕಾರಿಗಳು ಬಂದು ನೀರಿನ ಸ್ಯಾಂಪಲ್ ತೆಗೆದುಕೊಂಡು ಪ್ರಯೋಗಲಾಯಕ್ಕೆ ಕಳುಹಿಸಿದ್ದಾರೆ .
ಕೆರೆಗೆ ಜಿಲ್ಲಾ ಹಾಲು ಒಕ್ಕೂಟದಿಂದ ರಾಸಾಯನಿಕ ಮಿಶ್ರಿಣ ನೀರು ಬರುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಗುತ್ತಿಗೆದಾರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮೀನುಗಾರಿಕೆ ಇಲಾಖೆ, ಪರಿಸರ ಇಲಾಖೆ ಹಾಗೂ ಸಾದೊಳಲು ಗ್ರಾಪಂ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ದೂರು ನೀಡಿದ ಮೇಲೆ ಮನ್ ಮುಲ್ ವ್ಯವಸ್ಥಾಪಕರು ಯಾವುದೇ ರೀತಿಯ ಕ್ರಮಕೈಗೊಳ್ಳದೆ ನಕರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಕುದುರಗುಂಡಿಯ ಗ್ರಾಮಸ್ಥರು ಆರೋಪಿಸಿದ್ದಾರೆ.
ಕುದುರಗುಂಡಿಯ ಗ್ರಾಮದಲ್ಲಿ ರಾಸಾಯನಿಕ ದ್ರಾವಣದಿಂದ ತೊಳೆದು, ಆ ನೀರನ್ನು ಕಾಲುವೆಯ ಮೂಲಕ ಕೆರೆಗೆ ಬಿಡುತ್ತಿರುವುದರಿಂದ ಗ್ರಾಮದಲ್ಲಿ ಜನರು ಅತಂಕಕ್ಕೆ ಒಳಗಾಗಿದ್ದಾರೆ. ರಾಸಾಯನಿಕದಿಂದ ಗ್ರಾಮವು ಕಲುಷಿತಗೊಂಡಿದೆ. ಗ್ರಾಮದ ಜನರು ಮತ್ತು ಜಾನುವಾರುಗಳು ಕಲುಷಿತ ನೀರನ್ನು ಉಪಯೋಗಿಸುವಂತಾಗಿದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದ್ದು, ಜನರು ನೆಮ್ಮದಿಯಿಂದ ವಾಸಿಸಲು ಸಾಧ್ಯವಾಗುತ್ತಿಲ್ಲ.
ಈ ಬಗ್ಗೆ ಸಾದೊಳಲು ಗ್ರಾಮದ ಪಿಡಿಒ ಗಮನಕ್ಕೆ ತಂದಿದ್ದರು ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗುತ್ತಿದೆ.
ಈ ಪ್ರಕರಣವನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಚನ್ನಪ್ಪ ಮನವಿ ಮಾಡಿದ್ದಾರೆ.