ನಾಗಮಂಗಲ ಶಾಸಕರಾಗಿ ಆಯ್ಕೆಯಾದ ನಂತರ ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿ ಮಂಗಳವಾರ ಕ್ಷೇತ್ರಕ್ಕೆ ಮರಳಿದ ಎನ್.ಚಲುವರಾಯಸ್ವಾಮಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮತದಾರರು ಅದ್ಧೂರಿಯಾಗಿ ಸ್ವಾಗತಿಸಿದರು.
ನಾಗಮಂಗಲ ತಾಲೂಕಿಗೆ ಆಗಮಿಸಿದ ಚಲುವರಾಯಸ್ವಾಮಿ ಅವರನ್ನೂ ನೂರಾರು ಕಾರ್ಯಕರ್ತರು ಗೊಂದಹಳ್ಳಿ ಬಳಿ ಪಟಾಕಿ ಸಿಡಿಸಿ, ಹಾರ ತುರಾಯಿ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
ನಂತರ ಬೆಳ್ಳೂರಿಗೆ ಭೇಟಿ ನೀಡಿ ಕಾರ್ಯಕರ್ತರನ್ನ ಮಾತನಾಡಿಸಿದರು. ಆನಂತರ ನಾಗಮಂಗಲ ಪಟ್ಟಣದ ಟಿ ಬಿ ಬಡಾವಣೆಯಲ್ಲಿರುವ ಗಣಪತಿಗೆ ಪೂಜೆ ಸಲ್ಲಿಸಿ, ನಾಗಮಂಗಲ ಪಟ್ಟಣದಲ್ಲಿರುವ ಕಾಂಗ್ರೇಸ್ ಕಚೇರಿಗೆ ಆಗಮಿಸಿ ಮಾತನಾಡಿದ ಅವರು, ಕ್ಷೇತ್ರದ ಜನತೆಯನ್ನ ನೋಡಲು ಅಧಿವೇಶನ ತೊರೆದು ಬಂದಿದ್ದೇನೆ, ನಿತ್ಯ ನನ್ನನ್ನು ನೋಡುವ ಉದ್ದೇಶದಿಂದ ಕ್ಷೇತ್ರದ ಜನತೆ ಬೆಂಗಳೂರಿಗೆ ಬರುತ್ತಿದ್ದರು. ಅವರಿಗೆ ತೊಂದರೆ ಆಗುತ್ತಿದೆ, ಆ ನಿಟ್ಟಿನಲ್ಲಿ ಕ್ಷೇತ್ರದ ಜನತೆಯನ್ನು ನೋಡಲು ನಾನೇ ಆಗಮಿಸಿದ್ದೇನೆ, ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನನ್ನನ್ನು ಬೆಂಬಲಿಸುವ ಮೂಲಕ ಗೆಲ್ಲಿಸಿದ್ದಾರೆ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.