ವರದಿ : ನ.ಲಿ.ಕೃಷ್ಣ
ಮದ್ದೂರು ತಾಲ್ಲೂಕಿನ ನಗರಕರೆ ಸುತ್ತಮುತ್ತ ಶುಕ್ರವಾರ ಸಂಜೆ ಬಿದ್ದ ಭಾರೀ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು, ಮರದ ಕೊಂಬೆಗಳು ಮುರಿದು ಬಿದ್ದು, ಹೆಂಚುಗಳು, ಮನೆಯ ಮೇಲ್ಚಾವಣೆಯ ಶೀಟುಗಳು ಹಾರಿ ಹೋಗಿ ಹಲವು ಕುಟುಂಬಗಳಿಗೆ ಅಪಾರ ನಷ್ಟ ಸಂಭವಿಸುವ ಘಟನೆ ನಡೆದಿದೆ.
ಕೆಲವು ಮನೆಯ ಸಿಂಥೆಟಿಕ್ ನೀರಿನ ಟ್ಯಾಂಕ್ ಗಳು ಹಾರಿ ಹೋಗಿವೆ, ಇದರಿಂದ ಆಪಾರ ಪ್ರಮಾಣದ ನಷ್ಠ ಅನುಭವಿಸಿರುವ ಕುಟುಂಬದವರು ಇಂದು ರಾತ್ರಿ ಇಡೀ ಮಳೆ ಗಾಳಿಯ ಭಯದಲ್ಲೇ ಕಾಲ ಕಳೆಯುವಂತಾಗಿದೆ.
ಕಳೆದ ಒಂದು ತಿಂಗಳಿನಿಂದ ಮಳೆ ಇಲ್ಲದೇ ಬರದ ಪರಿಸ್ಥಿತಿ ಉಂಟಾಗಿತ್ತು. ಜನತೆ ಮಳೆಗಾಗಿ ಮುಗಿಲಿನತ್ತ ಮುಖ ಮಾಡಿದ್ದರು. ಆದರೆ ಇಂದು ಸಂಜೆ ಆರಂಭವಾದ ಮಳೆ, ಸಂತಸ ತರುವುದಕ್ಕೆ ಬದಲಾಗಿ ಜನರನ್ನು ಆತಂಕಕ್ಕೆ ದೂಡಿದೆ.
ಮದ್ದೂರು ತಾಲ್ಲೂಕು ಆಡಳಿತವು ಕೂಡಲೇ ನಷ್ಟಕ್ಕೀಡಾದ ಜನರ ನೆರವಿಗೆ ಧಾವಿಸಿ ಪರಿಹಾರ ಒದಗಿಸಬೇಕೆಂದು ಮುಖಂಡ ಎನ್.ಎಮ್.ಲಿಂಗಪ್ಪ ಮನವಿ ಮಾಡಿದ್ದಾರೆ.