✍️ ಸರೋವರ್ ಬೆಂಕಿಕೆರೆ
ಚನ್ನಗಿರಿ ಇಂದ ದಾವಣಗೆರೆ ಹೋಗುವ ಬಸ್ ನ ನಿರ್ವಾಹಕ ಟಿಕೆಟ್ ಕೊಡುವ ಸಂದರ್ಭದಲ್ಲಿ ಮುಂದೆ ಕೂತಿದ್ದ ಮೂರೂ ಜನ ಅಜ್ಜಿಯರಲ್ಲಿ ಒಬ್ಬರ ಬಳಿ ಆಧಾರ್ ಕಾರ್ಡ್ ಇರಲಿಲ್ಲ. ಆ ಅಜ್ಜಿ ಆಧಾರ್ ಕಾರ್ಡ್ ಇಲ್ಲಪ್ಪ, ಇವರಿಬ್ಬರಿಗೆ ಫ್ರೀ ಮಾಡು ನನ್ ಹತ್ರ ಇಪ್ಪತ್ ಇದೆ ಟಿಕೆಟ್ ಕೊಡು ಅಂದ್ರು. ಆಗ ಕಂಡಕ್ಟರ್, ವೋಟ್ ಮಾಡೋ ಚೀಟಿ ಇದಿಯಾ? ಅಜ್ಜಿ ಇಲ್ಲ ಅಂದ್ರು. ಬೇರೆ ಏನಾದ್ರು id ಐತ? ಪಾಸ್ ಬುಕ್ ಇದ್ರೆ ತೋರ್ಸು ಅಂದರು. ಅಜ್ಜಿ ಯಾವ್ದು ಇಲ್ಲಪ್ಪ ಮನೇಲಿದೆ ಅಂದ್ರು.. ಏನಜ್ಜಿ ಈಗಿನ ಕಾಲದಲ್ಲಿ ಎಲ್ಲ ಇಟ್ಕೋಬೇಕು, ಜೊತೆಗಿರೋರ ಫೋನ್ ಅಲ್ಲಿ ಆದ್ರೂ ಇಟ್ಕೋಬೇಕು ಫ್ರೀ ಇದ್ದಾಗ ಟಿಕೆಟ್ ಕೊಡೋಕೆ ನನ್ನ ಮನಸೇ ಒಪ್ಪಲ್ಲ ಅಂದ್ರು.. ಹಿಂದಿನಿಂದ ಕೆಲ ಹೆಣ್ಣುಮಕ್ಕಳು ಈ ಥರ ಯಾರು ಹೇಳಿರಲಿಲ್ಲಪ್ಪ ಅಂದ್ರು, ಇನ್ನು ಕೆಲವರು ಈ ಕಾಲದಲ್ಲಿ ಯಾರಪ್ಪ ನಿನ್ ಥರ ಇರ್ತರೆ ಅಂದ್ರು.
ಮುಂದಿನ ಸ್ಟಾಪ್ ಅಲ್ಲಿ ಸ್ಕೂಲ್ ಮಕ್ಕಳು ನಿಂತಿದ್ದರು ಅವ್ರಿಗೆ ನಿರ್ವಾಹಕರೇ ಎಲ್ಲಿಗೆ ಎಂದು ಕೇಳಿ ಹತ್ತಿಸಿಕೊಂಡರು. ಚನ್ನಗಿರಿ ಇಂದ ಚಿಕ್ಕಲಕೆರೆ ಅಂದ್ರೆ ಆ ಪ್ರಯಾಣಿಕರನ್ನ ಯಾರು ಹತ್ತಿಸಲ್ಲ. ಅದರಲ್ಲೂ ವಿದ್ಯಾರ್ಥಿಗಳು ಅಥವಾ ಪಾಸ್ ಇರೋರನ್ನ ಬಸ್ ಹತ್ತಿರಕ್ಕೂ ಬಿಟ್ಟುಕೊಳ್ಳದ ಡ್ರೈವರ್ ಕಂಡಕ್ಟರ್ ಗಳೇ ಹೆಚ್ಚು.. ಈ ಬಸ್ ನಲ್ಲಿ ಇಬ್ಬರು ಸಮಾಧಾನದಿಂದ ವರ್ತಿಸಿದರು.. ವಿದ್ಯಾರ್ಥಿಗಳನ್ನು ಮಹಿಳೆಯರನ್ನು ಗೌರವದಿಂದ ಬಸ್ ಹತ್ತಿಸಿಕೊಂಡು-ವ್ಯವಹರಿಸುತ್ತಿದ್ದಾರೆ.. ಈಗ ಬಸ್ ಫುಲ್ ಆಗಿ ದಾವಣಗೆರೆಗೆ ಹೊರಟಿದೆ. ಪುರುಷರಷ್ಟೇ ಮಹಿಳೆಯರು ಸಮಸಂಖ್ಯೆಯಲ್ಲಿ ಇದ್ದಾರೆ.
ಇಂತಹ ಸಂವೇದನೆ ಇರುವ ಡ್ರೈವರ್ ಕಂಡಕ್ಟರ್ ಗಳ ಸಂಖ್ಯೆ ಹೆಚ್ಚಾಗಲಿ.