Thursday, September 19, 2024

ಪ್ರಾಯೋಗಿಕ ಆವೃತ್ತಿ

“ಶಕ್ತಿ” ಉಚಿತ ಪ್ರಯಾಣ ; ಕಾಂಗ್ರೆಸ್ ಸರ್ಕಾರದಿಂದ ಮಹಿಳಾ ಸಬಲೀಕರಣದ ಆಶಯ ಪೂರ್ಣ – ದಿನೇಶ್ ಗೂಳಿಗೌಡ

ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವ ಶಕ್ತಿ ಯೋಜನೆಯಿಂದ ಮಹಿಳಾ ಸಬಲೀಕರಣ ಸಾಕಾರವಾಗುತ್ತಿದ್ದು, ಈ ಯೋಜನೆ ಹಲವು ವರ್ಷಗಳ ನಂತರವು ನಿರಂತರವಾಗಿ ಜಾರಿಯಲ್ಲಿರಲಿದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದ್ದಾರೆ.

ಮಹಿಳೆಯರು ಇಲ್ಲಸಲ್ಲದ ಊಹಾಪೋಹಗಳಿಗೆ, ಪ್ರತಿಪಕ್ಷಗಳ ಮಾತಿಗೆ ಕಿವಿಕೊಡುವುದು ಬೇಡ. ನೂಕು ನುಗ್ಗಲು ಮಾಡಿಕೊಳ್ಳದೇ ಸಾವಧಾನವಾಗಿ “ಶಕ್ತಿ” ಯೋಜನೆಯನ್ನು ಬಳಸಿಕೊಳ್ಳಬೇಕು. ಪ್ರತಿಪಕ್ಷಗಳು ಎಷ್ಟೇ ಟೀಕೆ ಮಾಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆದಿದೆ. ಪ್ರಣಾಳಿಕೆಯಲ್ಲಿ ನೀಡಿದಂತೆ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವನ್ನು ಅಧಿಕಾರಕ್ಕೆ ಬಂದ ತಿಂಗಳೊಳಗೆ ಈಡೇರಿಸಿದೆ ಎಂದು ಅವರು ತಿಳಿಸಿದ್ದಾರೆ.

ಮಹಿಳಾ ಸಬಲೀಕರಣದ ಬಗ್ಗೆ ಹಲವರು ಮಾತನಾಡುತ್ತಾರೆ. ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯ ಮೂಲಕ ಮಹಿಳಾ ಸಬಲೀಕರಣಕ್ಕೆ ನಿಜವಾದ ಅರ್ಥವನ್ನು ನೀಡಿದೆ. ಅಕ್ಷರಶಃ ಸ್ತ್ರೀ ಶಕ್ತಿಗೆ ಹೊಸ “ಶಕ್ತಿ”, ಚೈತನ್ಯವನ್ನು ತುಂಬಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲ ವರ್ಗದವರಿಗೆ ಅನುಕೂಲ

ಶಕ್ತಿ ಯೋಜನೆಯಿಂದ ಎಲ್ಲ ವರ್ಗದ ಮಹಿಳೆಯರಿಗೆ ಅನುಕೂಲವಾಗಿದೆ. ಗಾರ್ಮೆಂಟ್ ಫ್ಯಾಕ್ಟರಿಗೆ ಹೋಗುವವರು. ಮನೆ ಕೆಲಸಕ್ಕೆ ಹೋಗುವವರು, ಮಹಿಳಾ ಪೌರ ಕಾರ್ಮಿಕರು, ವಿದ್ಯಾರ್ಥಿನಿಯರು, ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗೆ ತೆರಳುವವರಿಗೆ, ಮಾತ್ರವಲ್ಲ ಧಾರ್ಮಿಕ ಕೇಂದ್ರಗಳಿಗೆ ತೆರಳುವ ಮಹಿಳೆಯರಿಗೆ, ತವರು ಮನೆಗೆ ತೆರಳುವ ತಾಯಂದಿರಿಗೆ, ಯುವತಿಯರು, ಗೃಹಿಣಿಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಪ್ರಯಾಣಿಕರು ಹೆಚ್ಚಳ!!

ಶಕ್ತಿ ಯೋಜನೆ ಜಾರಿಯಾದಾಗಿನಿಂದ ರಾಜ್ಯದಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಶೇಕಡಾ 32ರಷ್ಟು ಹೆಚ್ಚಿದೆ. ಜೂ. 11 ರಂದು ಯೋಜನೆ ಜಾರಿಯಾಗಿದೆ. ಈ ಮೊದಲು ರಾಜ್ಯದ ನಾಲ್ಕು ನಿಗಮಗಳಲ್ಲಿ ಪ್ರತಿ ದಿನ 82.51 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.‌ ಈಗ 1.10 ಕೋಟಿ ಜನ ಸರಾಸರಿ ಪ್ರಯಾಣ ಮಾಡುತ್ತಿದ್ದಾರೆ‌. ಮಹಿಳೆಯರ ಪ್ರಯಾಣವೂ ಹೆಚ್ಚಳವಾಗಿದ್ದು, ಪುಣ್ಯ ಕ್ಷೇತ್ರಗಳು ಸೇರಿದಂತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಿದೆ. ಅಂಕಿ ಅಂಶಗಳು ಯೋಜನೆಯ ಯಶಸ್ಸನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ

ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಮೂಲಕ ನಾರಿ ಸಬಲೀಕರಣಕ್ಕೆ ಅಕ್ಷರಶಃ ಬಲ ತುಂಬಿದೆ. ಯೋಜನೆ ಐದಲ್ಲ ಹತ್ತು ವರ್ಷದ ಬಳಿಕವೂ ಮುಂದುವರಿಯುತ್ತದೆ. ಆತಂಕ ಬೇಡ, ಅನಾವಶ್ಯಕ ಟೀಕೆಗಳಿಗೆ ತಲೆಕೆಡಿಸಿಕೊಳ್ಳಬಾರದು. ಮಹಿಳೆಯರು ಬಸ್ ಗಳಲ್ಲಿ ನುಗ್ಗಿ ತೆರಳುತ್ತಿರುವುದು ಕಂಡು ಬಂದಿದೆ. ಆದರೆ, ಯಾರೂ ಗೊಂದಲಗಳಿಗೆ ಒಳಗಾಗಬೇಡಿ. ಎಲ್ಲ ಮಹಿಳೆಯರಿಗೆ ಯೋಜನೆಯ ಉಪಯೋಗ ಖಂಡಿತ ದೊರೆಯುತ್ತದೆ. ಹಾಗಾಗಿ ಆತಂಕವಿಲ್ಲದೆ, ಅಪಾಯ ಮಾಡಿಕೊಳ್ಳದೆ ಪ್ರಯಾಣ ಮಾಡಿ ಎಂದು ಶಾಸಕ ದಿನೇಶ್ ಗೂಳಿಗೌಡ ವಿನಂತಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!