✍️ ಮುತ್ತುರಾಜು
ನಾನೂ ಗೌರಿ.ಕಾಂ
2013ರಲ್ಲಿ ಜಗದೀಶ್ ಶೆಟ್ದರ್ ಮುಖ್ಯಮಂತ್ರಿ ಆಗಿದ್ದ ಅವಧಿಯ ಕೊನೆಗೆ ಕರ್ನಾಟಕ ರಾಜ್ಯದ ಮೇಲಿದ್ದ ಒಟ್ಟು ಸಾಲ – 1,12,666 ಕೋಟಿ ರೂಪಾಯಿಗಳು.
2018ರಲ್ಲಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಕೊನೆಯಲ್ಲಿ ಕರ್ನಾಟಕ ರಾಜ್ಯದ ಮೇಲಿದ್ದ ಒಟ್ಟು ಸಾಲ – 2,45,950 ಕೋಟಿ ರೂಪಾಯಿಗಳು. ಅಂದರೆ ಅವರು ರಾಜ್ಯದ ಯೋಜನೆಗಳಿಗಾಗಿ ತಮ್ಮ ಅವಧಿಯಲ್ಲಿ 1,33,284 ಕೋಟಿ ರೂ ಸಾಲ ಮಾಡಿದ್ದರು. ಅವರ ನಂತರದಲ್ಲಿ ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬೊಮ್ಮಾಯಿಯವರ ಬಿಜೆಪಿ ಸರ್ಕಾರದ ಅಂತ್ಯದಲ್ಲಿ ರಾಜ್ಯದ ಸಾಲ 5,35,156 ಕೋಟಿ ರೂಪಾಯಿಗಳು. ಅಂದರೆ 5 ವರ್ಷದಲ್ಲಿ (2018-23) ಮಾಡಿದ ಸಾಲ 2,48,828 ಕೋಟಿ ರೂ. ಸಿದ್ದರಾಮಯ್ಯನವರು ಮಾಡಿದ್ದಕ್ಕಿಂತ ಡಬಲ್ ಆಗಿದೆ.
ಬಿಜೆಪಿ ಜನರಿಗೆ ಯಾವ ಒಳ್ಳೆಯ ಯೋಜನೆ ತಂದಿದೆ? ಒಂದೂ ಇಲ್ಲ. ಆದರೂ ಎರಡೂವರೆ ಲಕ್ಷ ಕೋಟಿ ರೂ ಸಾಲ ಮಾಡಿದ್ದು ಏಕೆ? ಏಕೆಂದರೆ 40% ನುಂಗಿ ನೀರು ಕುಡಿಯಲು, ಆಗ ಅವರನ್ನು ಈ ಗೋದಿ ಮೀಡಿಯಾಗಳು ಪ್ರಶ್ನಿಸಲೇ ಇಲ್ಲ. ಈಗ ಸಿದ್ದರಾಮಯ್ಯನವರು ಜನರಿಗೆ ಒಳ್ಳೆಯ ಗ್ಯಾರಂಟಿ ಯೋಜನೆ ಕೊಟ್ಟರೆ ಉರಿದು ಬೀಳುವುದು ಏಕೆ? ನಿಮಗೆ ದಮ್ಮು ತಾಕತ್ತಿದ್ದರೆ ಬಿಜೆಪಿ ಪಕ್ಷವನ್ನು ಪ್ರಶ್ನಿಸಿ.
ಮೋದಿ ಮಾಡಿದ ಸಾಲ ಬರೋಬ್ಬರಿ 100 ಲಕ್ಷ ಕೋಟಿ
ಇನ್ನು ಮೋದಿಯವರು ಅಧಿಕಾರ ಸ್ವೀಕರಿಸುವ ಮೊದಲು ದೇಶದ ಸಾಲ 55 ಲಕ್ಷ ಕೋಟಿ ರೂ ಇತ್ತು. ಈ 9 ವರ್ಷಗಳಲ್ಲಿ 155 ಲಕ್ಷ ಕೋಟಿ ರೂ ಆಗಿದೆ. ಅಂದರೆ ಮೋದಿಯವರು 100 ಲಕ್ಷ ಕೋಟಿ ಸಾಲ ಮಾಡಿದ್ದಾರೆ.
ರೈತರ ಖಾತೆಗೆ ವರ್ಷಕ್ಕೆ 6,000 ರೂ ಕೊಟ್ಟಿದ್ದೊಂದೇ ಮೋದಿಯವರ ಹೇಳಿಕೊಳ್ಳುವ ಸಾಧನೆ. ಇದಕ್ಕಾಗಿ ಮೂರು ವರ್ಷದಲ್ಲಿ ಮೋದಿ ಸರ್ಕಾರ ಕೇವಲ (65,000 ಕೋಟಿ ರೂ, 67,500 ಕೋಟಿ ರೂ ಮತ್ತು 68,000 ಕೋಟಿ ರೂ ಖರ್ಚು ಮಾಡಿದೆ. ಅಂದರೆ ಒಟ್ಟು 2.05 ಲಕ್ಷ ಕೋಟಿ ಮಾತ್ರ ಖರ್ಚಾಗಿದೆ.) ಹಾಗಿದ್ದರೂ 100 ಲಕ್ಷ ಕೋಟಿ ಸಾಲ ಮಾಡಿದ್ದೇಕೆ? ಇದನ್ನು ಕೇಳುವವರು ಯಾರು?
ಗ್ಯಾರಂಟಿಗಳಿಂದ ಕರ್ನಾಟಕ ದಿವಾಳಿಯಾಗುವುದಿಲ್ಲ!
ಈ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ವಾರ್ಷಿಕ 59,000 ಕೋಟಿ ರೂ.ಗಳು ತಗುಲುತ್ತದೆ. ಪಕ್ಕದ ಆಂಧ್ರ ಪ್ರದೇಶ ಸರ್ಕಾರವು ಕಳೆದ ನಾಲ್ಕು ವರ್ಷಗಳಿಂದ ಅಲ್ಲಿನ ಬಡಜನರ ಕಲ್ಯಾಣ ಯೋಜನೆಗಳಿಗಾಗಿ ಸುಮಾರು 2.12 ಲಕ್ಷ ಕೋಟಿ ರೂಗಳನ್ನು ಖರ್ಚು ಮಾಡಿದೆ. ಅಂದರೆ ಅಲ್ಲಿಯೂ ವಾರ್ಷಿಕ ಸರಾಸರಿ 53,000 ಕೋಟಿ ವೆಚ್ಚ ಮಾಡಿದೆ. ಅಂದ ಮಾತ್ರಕ್ಕೆ ಆಂಧ್ರ ಪ್ರದೇಶ ರಾಜ್ಯ ದಿವಾಳಿಯಾಗಿದೆಯೇ? ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸಹ ಇದೇ ಮಾದರಿಯ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದರೂ ಅವು ಸದೃಢವಾಗಿವೆ ಎಂಬುದನ್ನು ಮರೆಯಬಾರದು.
ಅನೇಕ ಆರ್ಥಿಕ ತಜ್ಞರು ರಾಜ್ಯ ಸರ್ಕಾರ ಜಾರಿಮಾಡುವ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಜಿಎಸ್ಟಿ, ನೋಟು ರದ್ಧತಿ, ಕೋವಿಡ್ ಸಾಂಕ್ರಾಮಿಕ ಕಾರಣದಿಂದ ಜನರ ಆರ್ಥಿಕ ಸ್ಥಿತಿ ಕುಸಿದಿದ್ದು, ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಹಾಗಾಗಿ ಈ ಯೋಜನೆಗಳಿಂದ ಜನರ ಕೈಗೆ ನೇರವಾಗಿ ಹಣ ಸಿಕ್ಕರೆ ಅಥವಾ ಉಚಿತ ವಿದ್ಯುತ್, ಅಕ್ಕಿ, ಬಸ್ಪಾಸ್ನಿಂದ ಅವರ ಹಣ ಉಳಿದರೆ ಅದನ್ನು ಬೇರೆ ವಸ್ತುಗಳನ್ನು ಕೊಳ್ಳಲು ಬಳಸುತ್ತಾರೆ. ಅವರ ಅಗತ್ಯ ವಸ್ತುಗಳನ್ನು ಕೊಳ್ಳಲು ಮುಂದಾಗುತ್ತಾರೆ. ಆಗ ಹಣದ ವಹಿವಾಟು ಹೆಚ್ಚಾಗುತ್ತದೆ. ಬೇಡಿಕೆ ಹೆಚ್ಚಾದಂತೆ ಉತ್ಪಾದನೆ ಹೆಚ್ಚಾಗುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ. ಉದ್ಯೋಗ ಸಿಕ್ಕಲ್ಲಿ ಜನ ಮತ್ತೆ ಖರ್ಚು ಮಾಡುತ್ತಾರೆ. ಜಿಡಿಪಿ – ತೆರಿಗೆ ಸಂಗ್ರಹ ಹೆಚ್ಚಳವಾಗುತ್ತದೆ.. ಹೀಗೆ ಆರ್ಥಿಕ ಸರಪಳಿ ಚೇತರಿಸಿಕೊಳ್ಳುತ್ತದೆ ಎಂಬುದು ಒಂದು ವಾದ.