ವಿದ್ಯಾರ್ಥಿಗಳು ಮಾದಕ ದ್ರವ್ಯ ವಸ್ತುಗಳಿಗೆ ಮಾರು ಹೋಗದೆ ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಆಯೋಜಿಸಿದ್ದ,”ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ”ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಗಾಂಜಾ, ಕೋಕೆನ್, ಬ್ರೌನ್ ಶುಗರ್, ಅಫೀಮುಗಳಂತಹ ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು.ಇವುಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಜೊತೆಗೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಕೂತುಹಲಕ್ಕಾಗಿ ಯಾರೊಬ್ಬರೂ ಮಾದಕ ದ್ರವ್ಯಗಳ ಬಳಸಬಾರದು. ದೇಶದ ಯುವ ಜನತೆ ಮಾದಕ ವ್ಯಸನ ಎಂಬ ಜಾಲದಲ್ಲಿ ಸಿಕ್ಕಿ ನರಳುತ್ತಿದ್ದಾರೆ, ಇತ್ತಿತ್ತಲಾಗಿ ಯುವ ಸಮೂಹ ಮಾದಕವೆಂಬ ವಿಷ ವರ್ತುಲದಲ್ಲಿ ಭಾಗವಹಿಸುತ್ತಿದೆ ಚಟಗಳು ಮೊದಲು ಸಂತೋಷ್ ನೀಡಿದರೂ ನಂತರ ಮನಸ್ಸಿನ ನೆಮ್ಮದಿ ಹಾಗೂ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದರು.
ಕ್ಷಣಿಕ ಸುಖ ನೀಡುವ ಮೋಹಕ್ಕೆ ಬಿದ್ದು ಸುಂದರವಾದ ಜೀವನ ಹಾಳು ಮಾಡಿಕೊಳ್ಳುವುದು ಬೇಡ, ಅಭ್ಯಾಸ ಹಾಗೂ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕು, ಬನ್ನಿ “ನಶೆ ಮುಕ್ತ ರಾಷ್ಟ್ರ” ನಿರ್ಮಾಣ ಮಾಡಲು ನಾವೆಲ್ಲರೂ ಸಂಕಲ್ಪ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು
ಇದೇ ವೇಳೆ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ನಿಲಯ ಪಾಲಕರಾದ ಜ್ಯೋತಿ ಪ್ರಕಾಶ್, ದೇವರಾಜ್ ಹಾಗೂ ವಸತಿ ನಿಲಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.