ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕೇಂದ್ರ ಸ್ಥಾನದ ಪತ್ರಕರ್ತರಿಗೆ ನಗರದಲ್ಲಿ ಜು.4ರಂದು ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಡಿಆರ್ಎಂ ಆಸ್ಪತ್ರೆಯ ಮಂಡ್ಯ ಶಾಖಾ ಮುಖ್ಯಸ್ಥ ಡಾ.ಎಂ.ಪ್ರಶಾಂತ್ ತಿಳಿಸಿದರು.
ಮಂಡ್ಯ ನಗರದ ನೂರಡಿ ರಸ್ತೆಯ ಡಿಆರ್ಎಂ ಆಸ್ಪತ್ರೆಯಲ್ಲೇ ಅಂದು ಬೆಳಗ್ಗೆ 11ಕ್ಕೆ ಶಿಬಿರ ಆರಂಭಗೊಳ್ಳಲಿದೆ. ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವುದು ಸಹಜ. ಹೀಗಾಗಿ ನಿಯಮಿತ ಆರೋಗ್ಯ ತಪಾಸಣೆಯಿಂದ ಮುಂದಾಗುವ ಅಪಾಯ, ತೊಂದರೆಗಳಿಂದ ಪಾರಾಗಬಹುದು. ಹೀಗಾಗಿ ಆಸ್ಪತ್ರೆಯಿಂದ ಪತ್ರಕರ್ತರ ಸಂಘದ ಸದಸ್ಯರಿಗಾಗಿ ಶಿಬಿರ ಸಂಘಟಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತಿರುವ ಡಿಆರ್ಎಂ ಆಸ್ಪತ್ರೆಯ ಮೂಳೆರೋಗಗಳ ತಜ್ಞ ಡಾ.ಮಂಜುನಾಥ್ ನೇತೃತ್ವದ ವೈದ್ಯರ ತಂಡ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ನಡೆಸಲಿದೆ. ಹೃದ್ರೋಗ ತಜ್ಞ ಡಾ.ರಮೇಶ್, ಫಿಜಿಷಿಯನ್ ಡಾ.ಎಂ.ಪ್ರಶಾಂತ್, ಮೂತ್ರಪಿಂಡ ರೋಗ ತಜ್ಞ ಡಾ.ವಿಜಯ್ ಅವರು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಇಕೋ ಇಸಿಜಿ ಸೇರಿದಂತೆ ಪ್ರಾಥಮಿಕ ರಕ್ತ ಪರೀಕ್ಷೆಗಳನ್ನು ಮಾಡಿ, ಸಲಹೆ ನೀಡಲಾಗುತ್ತದೆ ಎಂದರು.
ಯಾವುದೇ ರೋಗಿಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಗೋಲ್ಡನ್ ಅವರ್ನಲ್ಲಿ ಚಿಕಿತ್ಸೆ ದೊರೆತರೆ ಮುಂದಾಗುವ ತೊಂದರೆ, ಪ್ರಾಣಾಪಾಯದಿಂದ ಪಾರಾಗಲಿದ್ದಾರೆ. ಪಾರ್ಶ್ವವಾಯು ಪೀಡಿತ ರೋಗಿಗಳಿಗೆ ಮೊದಲ 2 ಗಂಟೆಯಲ್ಲಿ ಚಿಕಿತ್ಸೆ ನೀಡಿದರೆ, ಆತ ಶಾಶ್ವತ ಪಾರ್ಶ್ವವಾಯು ರೋಗಕ್ಕೆ ತುತ್ತಾಗುವುದನ್ನು ತಪ್ಪಿಸಬಹುದು. ಹೀಗಾಗಿ ದಿನದ 24 ತಾಸು ಕೂಡ ಗುಣಮಟ್ಟದ ಚಿಕಿತ್ಸೆ ಹಾಗೂ ಐಸಿಯು ಸೌಲಭ್ಯವನ್ನು ಡಿಆರ್ಎಂ ಆಸ್ಪತ್ರೆಯಲ್ಲಿ ಕಲ್ಪಿಸಲಾಗಿದೆ ಎಂದರು.
ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ಗುಣಮಟ್ಟದ ಆರೋಗ್ಯ ಸೇವೆಗೆ ಡಿಆರ್ಎಂ ಆಸ್ಪತ್ರೆ ಸಜ್ಜಾಗಿದೆ. ಮೊದಲ ಹಂತದಲ್ಲಿ ಪತ್ರಕರ್ತರಿಗೆ ಶಿಬಿರ ಆಯೋಜಿಸಿದ್ದು, ಹಂತಹಂತವಾಗಿ ನಾನಾ ವರ್ಗಗಳ ಜನರಿಗೆ ಶಿಬಿರಗಳನ್ನು ಸಂಘಟಿಸಲಾಗುವುದು. ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ್, ಮಾಜಿ ಅಧ್ಯಕ್ಷ ನವೀನ್ ಚಿಕ್ಕಮಂಡ್ಯ, ಡಿಆರ್ಎಂ ಆಸ್ಪತ್ರೆ ಆಡಳಿತಾಧಿಕಾರಿ ಲಾವಣ್ಯ, ವ್ಯವಸ್ಥಾಪಕ ಎಂ.ಹರೀಶ್, ಪಿಆರ್ಒ ಶಂಕರ್ ಉಪಸ್ಥಿತರಿದ್ದರು.