ರಾಜ್ಯದ ದಲಿತ, ಶೋಷಿತ ಅಭ್ಯುದಯದ ಬಜೆಟ್ ಬೇಡಿಕೆ, ಅವಕಾಶ ವಂಚಿತರಿಗೆ ತಾತ್ಕಾಲಿಕ ಪರಿಹಾರಗಳ ಗ್ಯಾರಂಟಿ ನಿಲ್ಲಿಸಿ ಶಾಶ್ವತ ಪರಿಹಾರ ಸೇರಿದಂತೆ ಇತರೆ ಹಕ್ಕೊತ್ತಾಯಗಳನ್ನು ಈಡೇರಿಸಲು ಒತ್ತಾಯಿಸಿ ಜು.3ರಂದು ನಗರದಲ್ಲಿ ಜನಾಗ್ರಹ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ನ್ಯಾಯ ನೀತಿ ಎಂಬ ಘೋಷಣೆಯೊಂದಿಗೆ ಮೆರವಣಿಗೆ ರೈತ ಸಭಾಂಗಣದ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರಗೆ ಬೆಳಿಗ್ಗೆ 11 ಗಂಟೆಗೆ ಸಾಗಲಿದೆ ಎಂದು ತಿಳಿಸಿದರು.
ದಸಂಸ ಸಂಸ್ಥಾಪಕ ಪ್ರೊ.ಕೃಷ್ಣಪ್ಪ ಅವರ ಜನ್ಮದಿನದ ಅಂಗವಾಗಿ ಭೂ ರಹಿತ ದುಡಿಯುವ ವರ್ಗಕ್ಕೆ ಭೂಮಿ ಹಂಚಿಕೆಗೆ ಒತ್ತಾಯ, ಕಾಂತರಾಜ ಆರಸ್ ಆಯೋಗ ನಡೆಸಿರುವ ಜಾತಿ ಗಣತಿ ಅಂಗೀಕಾರಕ್ಕೆ ಒತ್ತಾಯ ಸೇರಿದಂತೆ ಶೋಷಿತ ಜನಾಂಗದ ಹಲವು ಹಕ್ಕೊತ್ತಾಯಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ಸಾಗಲಿದೆ ಎಂದು ತಿಳಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಅನಿಲ್ ಕುಮಾರ್, ಸೋಮಶೇಖರ್, ಆನಂದ್, ಶ್ರೀನಿವಾಸ್ ಉಪಸ್ಥಿತರಿದ್ದರು.