ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಅವಕಾಶ ವಂಚಿತರಿಗೆ ತಾತ್ಕಾಲಿಕ ಪರಿಹಾರವಾಗಿದ್ದು, ಭೂಮಿ ನೀಡುವ ಮೂಲಕ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯನಗರದಲ್ಲಿ ಜನಾಗ್ರಹ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಂಡ್ಯನಗರದ ರೈತ ಸಭಾಂಗಣದ ಆವರಣದಿಂದ ಮೆರವಣಿಗೆ ಹೊರಟ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ತಾತ್ಕಾಲಿಕ ಪರಿಹಾರದ ಗ್ಯಾರಂಟಿ ಸಾಕು ಮಾಡಿ, ಶಾಶ್ವತ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸಾಮಾಜಿಕ, ಆರ್ಥಿಕ ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ ಸಮಾನತೆ ಕಲ್ಪಿಸಬೇಕು. ಎಚ್. ಕಾಂತರಾಜ್ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಜನಗಣತಿ ವರದಿಯನ್ನು ಸಂಪುಟ ಮತ್ತು ಅಧಿವೇಶನದಲ್ಲಿ ಅಂಗೀಕರಿಸಿ ಜಾರಿಗೊಳಿಸಬೇಕು, ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿರಿಸುವ ಪರಿಶಿಷ್ಟ ಜಾತಿ, ಪಂಗಡಗಳ ಉಪ ಯೋಜನಾ ಕಾಯ್ದೆಯಲ್ಲಿ ಮೀಸಲು ಅನುದಾನವನ್ನು ಹಿಂಪಡೆದುಕೊಳ್ಳುವ ಸರ್ಕಾರದ ಅವಕಾಶವನ್ನು ಕೈ ಬಿಡುವ ತಿದ್ದುಪಡಿ ಮಸೂದೆಯನ್ನು ಮಂಡಿಸಬೇಕೆಂದು ಒತ್ತಾಯಿಸಿದರು.
ಭೂಮಿ ಪರಭಾರೆ ನಿಷೇಧ ಕಾಯ್ದೆ ಸಮಗ್ರ ತಿದ್ದುಪಡಿ ಮಾಡಿ, ಭೂ ರಹಿತ ಕೃಷಿ ಕಾರ್ಮಿಕರಿಗೆ ತಲಾ 5 ಎಕರೆ ನೀಡಿ ಭೂಮಿ ಹಂಚಿಕೆ ಮಾಡಿಮ ಹಕ್ಕು ಖಾತ್ರಿಪಡಿಸುವ ಕರ್ನಾಟಕ ಸಮಗ್ರ ಭೂ ಕಾಯ್ದೆಯನ್ನು ಜಾರಿಗೊಳಿಸಬೇಕು, ಅನಾಗರಿಕ ಅಸ್ಪಶ್ಯತೆ ಆಚರಣೆ ಕೊನೆಗಾಣಿಸಲು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಪ್ರತಿನಿಧಿ ಒಳಗೊಂಡ ಜಾಗತಿಕ ಸಮೇವೇಶ ನಡೆಸಬೇಕು, ಅಸ್ಪೃಶ್ಯತೆ ನಿರ್ಮೂಲನೆಗೆ ಕ್ರಿಯಾ ಯೋಜನೆ ರೂಪಿಸಿ ಜಾರಿಗೊಳಿಸಲು ಬಜೆಟ್ ನಲ್ಲಿ ಅನುದಾನ ಮೀಸಲಿಸಬೇಕು ಎಂದು ಆಗ್ರಹಿಸಿದರು.
ನಾಗ ಮೋಹನ್ ದಾಸ್ ಹಾಗೂ ಮೀಸಲು ವರ್ಗೀಕರಣ ಗೊಳಿಸಲು, ನ್ಯಾ.ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಬ್ರಾಹ್ಮಣ್ಯ ವಾದಿ, ಮನುಸ್ಮೃತಿ ಆಧಾರಿತ ರಾಷ್ಟ್ರೀಯ ಶಿಕ್ಷಣ ನೀತಿ ಕೈ ಬಿಟ್ಟು. ಶಿಕ್ಷಣ ತಜ್ಞರ ಆಯೋಗ ರಚಿಸಿ ಏಕರೂಪದ ಸಮಾನ ಶಿಕ್ಷಣ ನೀತಿ ಜಾರಿಗೊಳಿಸಿ ಎಲ್ಲರಿಗೂ ಉಚಿತ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಅನಿಲ್ ಕುಮಾರ್ ಕೆರಗೋಡು,ಕೆ.ಎಂ ಶ್ರೀನಿವಾಸ್, ಈಚಗೆರೆ ನಾಗರಾಜ್. ಎಸ್ ಕುಮಾರ್, ಬಾಲರಾಜ್, ಮಾರಪ್ಪ ದ್ಯಾವಪಟ್ಟಣ, ಹರಿ ಕುಮಾರ್, ಬಿ.ಎಂ. ಸೋಮಶೇಖರ, ಬಿ.ಆನಂದ, ಗೀತಾ ಮೇಲುಕೋಟೆ ಭಾಗವಹಿಸಿದ್ದರು.