ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಕುಸಿತಗೊಳ್ಳುತ್ತಿದೆ, ಮಳೆಯ ಅಭಾವದಿಂದಾಗಿ ತೆಂಗಿನಕಾಯಿ ಉತ್ಪಾದನೆಯ ಇಳುವರಿ ಕಡಿಮೆಯಾಗಿದ್ದು, ರೈತರಿಗೆ ನಷ್ಟವಾಗುತ್ತಿದ್ದು, ದೈನಂದಿನ ಜೀವನ ಸಾಗಿಸಲು ಆಗದೇ ರೈತ ಆತ್ಮಹತ್ಯೆಗೇ ಶರಣಾಗುತ್ತಿದ್ದಾನೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 25,000 ರೂ.ಗಳ ಮಾರುಕಟ್ಟೆ ಬೆಂಬಲ ಬೆಲೆ ನಿಗದಿಗೊಳಿಸಬೇಕೆಂದು ತೆಂಗು ಬೆಳೆಗಾರರ ಸಂಘದ ಮುಖಂಡ ಹಾಗೂ ಜಿ.ಪಂ. ಮಾಜಿ ಸದಸ್ಯ ರಾಮಸ್ವಾಮಿ ಒತ್ತಾಯಿಸಿದರು.
ನಾಗಮಂಗಲ ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತರು ಬೆಳೆದೆ ಕೊಬ್ಬರಿ ಬೆಳೆಗೆ ನಿಗದಿತ ಬೆಲೆ ಹಾಗೂ ಖರೀದಿ ಕೇಂದ್ರಗಳನ್ನು ಉನ್ನತೀಕರಿಸಿ ತೆಂಗು ಬೆಳೆಗಾರರು ಬೆಳೆದ ತೆಂಗು ಬೆಳೆಯನ್ನು ಪ್ರತಿ ವರ್ಷ ಜಿಪಿಎಸ್ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಕಳೆದ 28 ವರ್ಷಗಳಿಂದ ಇಲ್ಲಿವರೆಗೂ ಕ್ರಮೇಣ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 19,500 ರೂ. ಬೆಲೆ ಇತ್ತು, ಪ್ರಸ್ತುತ 7,500 ರೂ ಗೆ ಕೊಬ್ಬರಿ ಬೆಲೆ ಕುಸಿದಿದ್ದು ರೈತರ ಬದುಕು ಚಿಂತಾಜನಕವಾಗಿದೆ ಎಂದು ಅಳಲು ವ್ಯಕ್ತಪಡಿಸಿದರು.
ರೈತರು ಜನಸಾಮಾನ್ಯರು ಖರೀದಿ ಮಾಡುವ ಅಗತ್ಯ ವಸ್ತುಗಳ ಬೆಲೆಯನ್ನು ಕಳೆದ 28 ವರ್ಷಗಳ ಅವಧಿಯಲ್ಲಿ ತುಲನೆ ಮಾಡಿದಾಗ 5 ರಿಂದ10ರಷ್ಟು ಅಧಿಕವಾಗಿದೆ. ಅಗತ್ಯ ವಸ್ತುಗಳ ಬೆಲೆಯೊಡನೆ ಕೊಬ್ಬರಿ ಬೆಲೆಯನ್ನು ವೈಜ್ಞಾನಿಕ ಅಂಕಿ ಸಂಖ್ಯೆಯೊಡನೆ ಗಮನಿಸಿದರೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 50,000ರೂ ಬೆಲೆ ಇರಬೇಕಿತ್ತು ಎಂದರು.
ಕೊಬ್ಬರಿ ಉತ್ಪಾದಿಸುವ ಮತ್ತು ಸಂಸ್ಕರಿಸಿ ಮಾರಾಟ ಮಾಡುವ ಸ್ಥಳಗಳಲ್ಲಿ ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನ ತೆರೆದು, ಅವು ನಿರಂತರ ಕೊಳ್ಳುವ ಪ್ರಕ್ರಿಯೆಯಲ್ಲಿರುವಂತೆ ಗಮನವರಿಸಬೇಕು, ಈ ಎಲ್ಲಾ ಬೇಡಿಕೆಗಳನ್ನು ಶೀಘ್ರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಡೇರಿಸಬೇಕೆಂದು ಒತ್ತಾಯಿಸಿದರು.
ತಮ್ಮ ಬೇಡಿಕೆಗಳನ್ನು ಜು.14ರೊಳಗೆ ಈಡೇರಿಸದಿದ್ದರೆ ಜು.15ರಂದು ಕದಬಹಳ್ಳಿ ವ್ಯವಸಾಯೋತ್ಪಾನ್ನ ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.